ಸಿ.ಟಿ.ರವಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಐಜಿಪಿಗೆ ಕಿಸಾನ್ ಕಾಂಗ್ರೆಸ್ ದೂರು
ಸಚಿನ್ ಮೀಗಾ
ಬೆಂಗಳೂರು, ಜು.4: ಚಿಕ್ಕಮಗಳೂರು ಜಿಲ್ಲೆಯ ಮಸಗಲಿಯ 87 ರೈತ ಕುಟುಂಬಗಳು ಬೆಳೆದ ಕಾಫಿ, ಅಡಿಕೆ, ಕಾಳುಮೆಣಸು, ಗಿಡಗಳನ್ನು ಕಡಿಯಲು ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸೇರಿದಂತೆ ಪ್ರಮುಖರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ವತಿಯಿಂದ ದೂರು ಸಲ್ಲಿಸಲಾಗಿದೆ.
ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಉದ್ದೇಶ ಪೂರ್ವಕವಾಗಿಯೇ ಮಸಗಲಿಯ ರೈತ ಕುಟುಂಬಗಳನ್ನು ಒಕ್ಕಲಿಬ್ಬಿಸಲು ಅಲ್ಲಿನ ಬೆಳೆಯನ್ನೇ ನಾಶ ಮಾಡಲಾಗಿದೆ. ಇದಕ್ಕೆ ನೇರವಾಗಿ ಅಲ್ಲಿನ ಉಸ್ತುವಾರಿ ಸಚಿವರೇ ಕಾರಣವಾಗಿದ್ದು, ಈ ಸಂಬಂಧ ಅವರು ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ರೈತರ ಬೆಳೆದ ಮರ ಗಿಡಗಳನ್ನು ಕಡಿದ ಅರಣ್ಯ ಅಧಿಕಾರಿಗಳನ್ನು 36 ಗಂಟೆಯ ಅವಧಿಯೊಳಗೆ ಅಮಾನತ್ತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಸಚಿನ್ ಮೀಗಾ ಎಚ್ಚರಿಕೆ ನೀಡಿದರು.