ನಿವೃತ್ತಿ ಹೊಂದಿದ 15 ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ
ಬೆಂಗಳೂರು, ಜು. 10: ಅವಧಿ ಪೂರ್ಣಗೊಳಿಸಿ ಜೂನ್ ತಿಂಗಳಿನಲ್ಲಿ ವಿಧಾನ ಪರಿಷತ್ತಿನ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದಿದ 15 ಮಂದಿ ಸದಸ್ಯರನ್ನು ಇಂದು ಬೀಳ್ಕೊಡಲಾಯಿತು.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಮೇಲ್ಮನೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ವಿಪಕ್ಷ ಸಚೇತಕ ನಾರಾಯಣ ಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ನಿವೃತ್ತ 15 ಮಂದಿ ಸದಸ್ಯರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ನಿವೃತ್ತಿ ಹೊಂದಿದ ಸದಸ್ಯರಾದ ಡಾ.ಜಯಮಾಲ, ಜಯಮ್ಮ ಬಾಲರಾಜ್, ಟಿ.ಎ.ಸರವಣ, ಎಚ್.ಎಂ.ರೇವಣ್ಣ, ಶರಣಪ್ಪ ಮಟ್ಟೂರು, ಬೋಸರಾಜು, ಎಂ.ಸಿ.ವೇಣುಗೋಪಾಲ ಸೇರಿದಂತೆ ಇನ್ನಿತರರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ತಿಪ್ಪಣ್ಣ ಕಮಕನೂರ, ಹಿಂದುಳಿದ ಸಮುದಾಯದಿಂದ ಬಂದ ನನಗೆ ಉತ್ತಮ ಅವಕಾಶ ದೊರಕಿಸಿ ಕೊಟ್ಟಿದ್ದೀರಿ. ನನಗೆ ತಂದೆ ಇಲ್ಲ. ಆದರೆ, ಆ ಸ್ಥಾನದಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ನೋಡಿದ್ದೇನೆ. ಅದೇ ರೀತಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನಾನು ನನ್ನ ಸಹೋದರನ ಸ್ಥಾನದಲ್ಲಿ ಕಂಡಿದ್ದೇನೆ ಎಂದು ಬಾವುಕರಾದರು.
ನಾಮನಿರ್ದೇಶಿತ ಸದಸ್ಯರಾಗಿದ್ದ ಅಬ್ದುಲ್ ಜಬ್ಬಾರ್, ಡಾ.ಜಯಮಾಲ, ಐವನ್ ಡಿಸೋಜ, ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ತಿಪ್ಪಣ್ಣ ಕಮಕನೂರ ಅವರು ಜೂ.23ರಂದು ನಿವೃತರಾಗಿದ್ದರು. ವಿಧಾನಸಭೆಯಿಂದ ಪರಿಷತ್ತಿಗೆ ಚುನಾಯಿತರಾಗಿದ್ದ ಜಯಮ್ಮ ಬಾಲರಾಜ್, ಎನ್.ಎಸ್.ಬೋಸರಾಜು, ಎಚ್.ಎಂ.ರೇವಣ್ಣ, ಟಿ.ಎ.ಶರವಣ, ಡಿ.ಯು.ಮಲ್ಲಿಕಾರ್ಜುನ, ಎಂ.ಸಿ.ವೇಣುಗೋಪಾಲ್ ಅವರು ಜೂನ್ 30ಕ್ಕೆ ನಿವೃತ್ತಿಯಾಗಿದ್ದರು. ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಆರ್.ಚೌಡರೆಡ್ಡಿ ತೂಪಲ್ಲಿ, ಎಸ್.ವಿ.ಸಂಕನೂರ, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಹಾಗೂ ಶರಣಪ್ಪ ಮಟ್ಟೂರ ಅವರು ಜೂ.30ಕ್ಕೆ ನಿವೃತ್ತಿಹೊಂದಿದ್ದರು.