ಪೌರ ಕಾರ್ಮಿಕರೊಂದಿಗೆ ಮಹಿಳೆ ಅಸಭ್ಯ ವರ್ತನೆ ಆರೋಪ: ಸ್ಪಷ್ಟನೆ ನೀಡುವಂತೆ ಬಿಬಿಎಂಪಿಗೆ ಪತ್ರ
ಬೆಂಗಳೂರು, ಜು.12: ಇತ್ತೀಚಿಗೆ ಬಿಬಿಎಂಪಿ ಪೌರ ಕಾಮಿರ್ಕರೊಂದಿಗೆ ಮಹಿಳೆಯೊಬ್ಬಾಕೆ ಅಸಭ್ಯವಾಗಿ ವರ್ತಿಸಿದ ಆರೋಪ ಪ್ರಕರಣ ಸಂಬಂಧ ಸ್ಪಷ್ಟನೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಅವರು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಕೋವಿಡ್-19 ನೆಪದಲ್ಲಿ ಪೌರಕಾರ್ಮಿಕರಿಗೆ ಹತ್ತಿರ ಸೇರಿಸದೆ ನೀರನ್ನು ರಸ್ತೆಯಲ್ಲಿಟ್ಟ ಮಹಿಳೆಯೊಬ್ಬಾಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆ ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದ್ದರೂ, ಈ ಘಟನೆ ತಿರುಚಿರುವ ಬಗ್ಗೆ ಹಾಸನದ ಸಾಮಾಜಿಕ ಹೋರಾಟಗಾರರು ದೂರು ಸಹ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಘಟನೆ ನಡೆದ ಸ್ಥಳ ತನಿಖೆ ನಡೆಸಿ, ಸಂಬಂಧಿಸಿದವರ ಹೇಳಿಕೆ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದು. ಹಾಗೂ ಪೌರಕಾರ್ಮಿಕರ ಕೆಲಸ ನಡೆಸುವ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ಮತ್ತಿತರ ವ್ಯವಸ್ಥೆ ಮಾಡಲು ಪತ್ರದಲ್ಲಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.