ಸಿಪಿಐ ನಾಯಕ ಕಾಂ.ಎಸ್.ಸುರೇಂದ್ರ ನಿಧನ
ಬೆಂಗಳೂರು, ಜು.12: ಭಾರತೀಯ ಕಮ್ಯುನಿಸ್ಟ್ ಪಕ್ಷದ(ಸಿಪಿಐ) ಹಿರಿಯ ನಾಯಕ ಕಾಂ.ಎಸ್.ಸುರೇಂದ್ರ ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಾರ್ಮಿಕ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಕಾಂ.ಎಸ್.ಸುರೇಂದ್ರ, ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ರಾಜ್ಯ ಬ್ಯಾಂಕ್ ಉದ್ಯೋಗಿಗಳ ಸಂಘದ ನಾಯಕರಾಗಿ ಕಾರ್ಮಿಕ ಚಳವಳಿಯನ್ನು ಕಟ್ಟಿ ಬೆಳೆಸಿದ್ದರು. ಹಾಗೂ ಇಂಡೋ ಸೋವಿಯಟ್ ಸಾಂಸ್ಕೃತಿಕ ಸಂಘಟನೆ, ಅಖಿಲ ಭಾರತ ಶಾಂತಿ ಸೌಹಾರ್ದತಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿದ್ದರು.
ಹೊಸತು ಮಾಸಪತ್ರಿಕೆಯ ಸಹ ಸಂಪಾದಕರಾಗಿ ನಾಡಿನ ಜನತೆಗೆ ಉತ್ಕೃಷ್ಟ ಲೇಖನಗಳನ್ನು ನೀಡುವಲ್ಲಿ ಶ್ರಮಿಸಿದ್ದ ಕಾಂ.ಸುರೇಂದ್ರ, ಬದುಕಿನುದ್ದಕ್ಕೂ ಹೋರಾಟಗಾರರಾಗಿಯೇ ಜೀವನ ಸವೆಸಿದವರು. ಅವರ ನಿಧನದಿಂದ ಉತ್ತಮ ಸಂಗಾತಿಯನ್ನು ಕಳೆದುಕೊಂಡಿದ್ದೇವೆಂದು ಎಐಟಿಯುಸಿ ರಾಜ್ಯ ಸಮಿತಿಯ ಅಧ್ಯಕ್ಷ ಅನಂತಸುಬ್ಬರಾವ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಪಿಐ ಪರವಾಗಿ ಕಾಂ.ಸಾತಿ ಸುಂದರೇಶ್, ಕಾಂ.ಜ್ಯೋತಿ, ಕಾಂ.ವಿಜಯ ಭಾಸ್ಕರ್, ಕಾಂ.ಸತ್ಯಾನಂದ, ಕಾಂ.ರಜನಿಕಾಂತ್ ಅಂತಿಮ ನಮನ ಸಲ್ಲಿಸಿದರು.