ದಾಖಲಾತಿಗೆ ನಿರಾಕರಿಸಿದ ಬೆಂಗಳೂರಿನ 3 ಆಸ್ಪತ್ರೆಗಳು: ಕೊರೋನ ವಿರುದ್ಧದ ಹೋರಾಟದಲ್ಲಿದ್ದ ವೈದ್ಯ ಮೃತ್ಯು
ಬೆಂಗಳೂರು: ಕೋವಿಡ್ 19 ವರದಿ ನೀಡಿಲ್ಲ ಎಂದು ಮೂರು ಆಸ್ಪತ್ರೆಗಳು ಹಿಂದಕ್ಕೆ ಕಳುಹಿಸಿದ ಬಳಿಕ ಸರಕಾರಿ ವೈದ್ಯರೊಬ್ಬರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ವೈದ್ಯರನ್ನು ಡಾ. ಮಂಜುನಾಥ್ ಎಂದು ಗುರುತಿಸಲಾಗಿದ್ದು, ಕೊರೋನ ವಿರುದ್ಧದ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು
ರಾಮನಗರ ನಿವಾಸಿಯಾಗಿರುವ ಇವರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಬೆಂಗಳೂರಿನಲ್ಲಿ ಮೂರು ಆಸ್ಪತ್ರೆಗಳು ಇವರನ್ನು ದಾಖಲಿಸಲು ನಿರಾಕರಿಸಿದ್ದವು. ಈ ಎಲ್ಲಾ ಆಸ್ಪತ್ರೆಗಳು ಕೊರೋನ ವರದಿ ಬೇಕೆಂದು ಹೇಳಿದ್ದವು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ದಯಾನಂದ್ ಸಾಗರ್ ಕ್ಯಾಂಪಸ್ ನ ಹೊರಗಿರುವ ಫುಟ್ಪಾತ್ ನಲ್ಲಿ ಈ ಬಗ್ಗೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದ ನಂತರ ಜೂನ್ 25ರಂದು ಸಾಗರ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದ್ದು, ನಂತರ ಬೆಂಗಳೂರು ಮೆಡಿಕಲ್ ಕಾಲೇಜ್ ಆ್ಯಂಡ್ ರಿಸರ್ಚ್ ಇನ್ ಸ್ಟಿಟ್ಯೂಟ್ ಗೆ ದಾಖಲಿಸಲಾಯಿತು. ಇಂದು ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಡಾ.ಮಂಜುನಾಥ್ ಜುಲೈ 9ರಂದೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಅವರು ಪ್ಲಾಸ್ಮಾ ಥೆರಪಿ ಬೇಕೆಂದು ಬಯಸಿದ್ದರು ಎಂದು ಆಸ್ಪತ್ರೆ ಹೇಳಿದೆ.
ಡಾ. ಮಂಜುನಾಥ್ ಕುಟುಂಬದ 6 ಮಂದಿಗೆ ಕೊರೋನ ವೈರಸ್ ದೃಢಪಟ್ಟಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ.