ಬೆಂಗಳೂರು: ಉಸಿರಾಟದ ತೊಂದರೆ ಇದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಪತಿ, ಪುತ್ರ ಹೃದಯಾಘಾತದಿಂದ ಮೃತ್ಯು
ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ ಮಹಿಳೆ
ಬೆಂಗಳೂರು, ಜು.24: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ ಬಳಿಕ ಪುತ್ರ ಹಾಗೂ ತಂದೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ಕೆಆರ್ ಪುರಂ ವಿಜಿನಾಪುರದ ನಿವಾಸಿ ಆಗಿರುವ ಮಹಿಳೆ ಅಫ್ರೋಝ ಎಂಬವರನ್ನು ಉಸಿರಾಟ ತೊಂದರೆಯಿಂದಾಗಿ ಇಲ್ಲಿನ ಐಟಿಪಿಎಲ್ ಸಮೀಪದ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉಸಿರಾಟ ತೊಂದರೆ ಹೆಚ್ಚಾದ ಹಿನ್ನೆಲೆ ಅಲ್ಲಿನ ವೈದ್ಯರು ಮಹಿಳೆಯನ್ನು ಐಸಿಯು ವಾರ್ಡಿಗೆ ದಾಖಲಿಸಬೇಕೆಂದು ಹೇಳಿದ್ದು, ಇದನ್ನು ಕೇಳಿದ ಮಹಿಳೆಯ ಪತಿ ಸೆಯ್ಯದ್ ಸತ್ರಾಝ್ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಈ ಘಟನೆ ನಡೆದ ಎರಡು ದಿನಗಳ ಬಳಿಕ ಇವರ ಪುತ್ರ ಸೆಯ್ಯದ್ ಇಮ್ರಾನ್ ಎಂಬುವರೂ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಇದರ ನಡುವೆ, ಗುರುವಾರ ಆಸ್ಪತ್ರೆಯ ಸಿಬ್ಬಂದಿ ಇವರ ಕುಟುಂಬಸ್ಥರಿಗೆ ಕರೆ ಮಾಡಿ, ಅಫ್ರೋಝಾ ಸಹ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
Next Story