ಸತತ ಕಾರ್ಯ ನಿರ್ವಹಿಸಲು ಒತ್ತಡ ಆರೋಪ: ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಪ್ರತಿಭಟನೆ
ಬೆಂಗಳೂರು, ಜು.29: ಕೋವಿಡ್-19 ಸಂಬಂಧ ಕ್ವಾರಂಟೈನ್ ಪ್ರಕ್ರಿಯೆಗೆ ಒಳಪಡಿಸದೆ, ಸತತ ಕಾರ್ಯ ನಿರ್ವಹಿಸುವಂತೆ ಒತ್ತರ ಹೇರಲಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಪ್ರತಿಷ್ಠಿತ ಕೆಂಪೇಗೌಡ(ಕಿಮ್ಸ್) ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧ ಸಿಬ್ಬಂದಿ ಪ್ರತಿಭಟನೆ ನಡೆಸಿದರು ಎಂದು ವರದಿಯಾಗಿದೆ.
ಬುಧವಾರ ಆಸ್ಪತ್ರೆ ಮುಂಭಾಗ ಸಾಂಕೇತಿಕವಾಗಿ ಜಮಾಯಿಸಿದ ವೈದ್ಯಕೀಯ ಸಿಬ್ಬಂದಿ, ಕೊರೋನ ಸಂದರ್ಭದಲ್ಲಿ ಮೊದಲಿಗೆ ಒಂದು ವಾರ ಕ್ವಾರಂಟೈನ್ ಪ್ರಕ್ರಿಯೆಗೆ ಒಳಗಾದ ಬಳಿಕವೇ ಕೆಲಸಕ್ಕೆ ಹಾಜರಾಗುವಂತೆ ಹೇಳಲಾಗಿತ್ತು. ಆದರೆ, ದಿಢೀರ್ ಆದೇಶ ಮಾರ್ಪಡು ಮಾಡಿ, ಸತತ ಕಾರ್ಯ ನಿರ್ವಹಿಸುವಂತೆ ಒತ್ತರ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕ್ವಾರಂಟೈನ್ ಇಲ್ಲದೆ ಕೆಲಸ ನಿರ್ವಹಿಸುವಂತೆ ಒತ್ತಡ ಹಾಕಿ ಕೆಲಸದ ಸಮಯವನ್ನು ಡಾ.ವಿನೋದ್ ಎಂಬವರು ಹೆಚ್ಚಿಸಿದ್ದಾರೆ. ಅಷ್ಟೇ ಅಲ್ಲದೆ, ಜೊತೆಗೆ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ನಡುವೆ ಪಿಪಿಇ ಕಿಟ್ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದ್ದು, ಇದೇ ಕಾರಣದಿಂದಾಗಿ 5 ಮಂದಿ ನರ್ಸ್ ಗಳಿಗೆ ಕೊರೋನ ಸೋಂಕು ಅಂಟಿದೆ. ಹಾಗಾಗಿ, ಇಲ್ಲಿನ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.