ಸುಳ್ಳು ಮಾಹಿತಿ ನೀಡಿದ 4 ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್: ಬಿಬಿಎಂಪಿ ಆಯುಕ್ತ ಮಂಜುನಾಥ್
ಬೆಂಗಳೂರು, ಆ.10: ಆಸ್ಪತ್ರೆಗಳು ಹಾಸಿಗೆ ಸಾಮರ್ಥ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ ನಗರದ ನಾಲ್ಕು ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶಿಸಲಾಗಿದೆ ಎಂದು ಪಾಲಿಕೆ ಆಯಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕಿತ ವ್ಯಕ್ತಿಗಳಿಗೆ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡದ ನಗರದ ನಾಲ್ಕು ಪ್ರಮುಖ ಆಸ್ಪತ್ರೆಗಳಾದ ನೃಪತುಂಗ ರಸ್ತೆಯ ಸೇಂಟ್ ಮಾರ್ಥಾಸ್, ಶಂಕರಪುರದ ರಂಗದೊರೈ, ಕ್ವೀನ್ಸ್ ರಸ್ತೆಯ ಶಿಫಾ ಆಸ್ಪತ್ರೆ, ಕನ್ನಿಂಗ್ಹ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ನಾಲ್ಕೈದು ಆಸ್ಪತ್ರೆಯವರು ಒಟ್ಟಾಗಿ ಬಂದು ಒಂದೆರಡು ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೋನ ಸೋಂಕಿತರ ಆರೈಕೆಗೆ ಬಿಟ್ಟುಕೊಟ್ಟು ಉಳಿದ ಆಸ್ಪತ್ರೆಗಳನ್ನು ಸೋಂಕಿತರಲ್ಲದವರಿಗೆ ಬಳಕೆ ಮಾಡಿಕೊಳ್ಳಲು ನಮ್ಮ ಅಭ್ಯಂತರವಿಲ್ಲ. ಒಟ್ಟಾರೆ ಸೋಂಕಿತರಿಗೆ ಹಾಸಿಗೆ ಸಿಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಆಯುಕ್ತರು ತಿಳಿಸಿದರು.
ಸಾಕ್ರ ವಿರುದ್ಧ ಕ್ರಮ
ಸರಕಾರದ ನಿಯಮದಂತೆ ಶೇ.50% ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡದೆ ಕಾನೂನು ಉಲ್ಲಂಘಿಸಿರುವ ಮಾರತ್ ಹಳ್ಳಿಯ ಸಾಕ್ರ ಆಸ್ಪತ್ರೆಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಸಲಿಸಲಾಗಿದೆ. ಆಸ್ಪತ್ರೆಯ ಮೂವರು ಮುಖ್ಯಸ್ಥರನ್ನು ಆರೋಪಿಗಳನ್ನಾಗಿ ಹೊಣೆ ಮಾಡಲಾಗಿದೆ. ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ನಿಶ್ಚಿತ.
-ಡಾ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ