ಕೊರೋನ ಸೋಂಕಿನ ಮಧ್ಯೆ ಕೆಲಸ ನಿಜಕ್ಕೂ ಸವಾಲಿನದು: ಕಮಲ್ ಪಂತ್
ಬೆಂಗಳೂರು, ಆ.2: ನಗರದಲ್ಲಿ ಕೊರೋನ ಹೆಚ್ಚಳವಾಗುತ್ತಿದೆ. ರಾತ್ರಿ ವೇಳೆಯ ಕಫ್ರ್ಯೂ ಹಾಗೂ ಲಾಕ್ಡೌನ್ ಜಾರಿಯನ್ನು ಸಡಿಲ ಗೊಳಿಸಲಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಗರದ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ, ಇದು ನಿಜಕ್ಕೂ ಸವಾಲಿನ ಕೆಲಸ ಎಂದು ಕಮಲ್ ಪಂತ್ ಹೇಳಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಕಾನೂನು ಸುವ್ಯವಸ್ಥೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿರುವ ಕಮಲ್ ಪಂತ್ ಅವರು, ಲಾಕ್ಡೌನ್ ಸಡಿಲಿಕೆಯಾದ ನಂತರ ಕೊರೋನ ನಿರ್ವಹಣಾ ಕರ್ತವ್ಯಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದು, ಸಿಬ್ಬಂದಿ ಕೊರೋನ ಸೋಂಕಿನ ಮಧ್ಯೆ ಕೆಲಸ ಮಾಡುವುದು ಮತ್ತು ಪೊಲೀಸರ ದಿನನಿತ್ಯದ ಕಾರ್ಯವೈಖರಿಯನ್ನು ನಿಭಾಯಿಸುವುದನ್ನು ಬಹುದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಪೊಲೀಸರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಮ್ಮನ್ಸ್ ಹೊರಡಿಸುವುದು, ವಾರಂಟ್ ಹೊರಡಿಸುವುದು ಮುಂತಾದ ಅವರ ಕೆಲಸ ಗಳನ್ನು ಕಡಿಮೆ ಮಾಡಲಾಗುವುದು. ಪೊಲೀಸರಿಗೆ ನೆರವು ನೀಡಲು ಹೋಂ ಗಾಡ್ರ್ಸ್ಗಳನ್ನು ಸಹ ನಿಯೋಜನೆ ಮಾಡಲಾಗುವುದು ಎಂದರು.
ಮೂರ್ನಾಲ್ಕು ತಿಂಗಳಿನಿಂದ ಕೊರೋನ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರಿಗೂ ಒತ್ತಡವಾಗುತ್ತಿದೆ, ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ. ಅವರ ಕಷ್ಟ ಸುಖಗಳನ್ನು ವಿಚಾರಿಸಬೇಕಾಗಿದೆ. ನಮ್ಮ ಮುಂದೆ ಹಲವು ಸವಾಲು ಗಳಿವೆ, ಅವುಗಳಿಗೆ ಸಹ ಪರಿಹಾರ ಹುಡುಕಬೇಕಿದೆ ಎಂದು ಪಂತ್ ಹೇಳಿದರು.