ಎಸ್ಪಿ, ಪಿಎಸ್ಐಗಳ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಲು ಲೀಗಲ್ ನೋಟಿಸ್
ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆ
ಬೆಂಗಳೂರು, ಆ.3: ಬೆಸ್ಕಾಂನಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಉದ್ಯೋಗ ಪಡೆದಿರುವ ಕೆಜಿಎಫ್ ಮೂಲದ ಕೆ.ನಾಗೇಶ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳದ ಕೋಲಾರ ನಗರ ಪೊಲೀಸ್ ಠಾಣೆಯ ಪಿಎಸ್ಐ ಅಣ್ಣಯ್ಯ, ಗ್ರಾಮಾಂತರ ಠಾಣೆಯ ಪ್ರದೀಪ್ ಹಾಗೂ ಕೋಲಾರ ಎಸ್ಪಿ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಬೇಕೆಂದು ವಕೀಲೆ ಸುಧಾ ಕಟ್ಟಾ ಎನ್ನುವವರು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಹಾಗೊಂದು ಬಾರಿ ಇವರ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸದಿದ್ದರೆ, ಗೃಹ ಇಲಾಖೆ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ನ್ಯಾಯಾಲಯಲ್ಲಿ ದಾಖಲಿಸಲಾಗುವುದೆಂದು ಎಚ್ಚರಿಸಲಾಗಿದೆ.
ಸುಳ್ಳು ದಾಖಲೆಗಳನ್ನು ಸಲ್ಲಿಸಿ ಉದ್ಯೋಗ ಪಡೆದಿರುವ ಕೆ.ನಾಗೇಶ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಅವರು ದೂರು ದಾಖಲಿಸಿದ್ದರು. ಆದರೆ, ಈ ಇಬ್ಬರು ಪಿಎಸ್ಐಗಳೂ ಎಫ್ಐಆರ್ ದಾಖಲಿಸಿಕೊಂಡಿರಲಿಲ್ಲ. ಈ ಸಂಬಂಧ ಕೋಲಾರ ಎಸ್ಪಿ ಕಾರ್ತಿಕ್ರೆಡ್ಡಿ ಅವರಿಗೆ ದೂರು ನೀಡಲಾಗಿತ್ತು. ಆದರೆ, ಕಾರ್ತಿಕ್ರೆಡ್ಡಿ ಅವರು 7 ತಿಂಗಳು ಕಳೆದರೂ ಈ ಇಬ್ಬರು ಪಿಎಸ್ಐಗಳ ಮೇಲೆ ಕ್ರಮ ಜರುಗಿಸದೆ ದಿವ್ಯ ನಿರ್ಲಕ್ಷ್ಯತೆ ತೋರಿದ್ದರು ಎಂದು ಆರೋಪಿಸಲಾಗಿದೆ.