ರವಿ ಪೂಜಾರಿಯ ವಿಚಾರಣೆ ನಡೆಸಿದ್ದ 14 ಪೊಲೀಸರಿಗೆ ಕೊರೋನ
ಬೆಂಗಳೂರು, ಆ.4: ಭೂಗತ ಪಾತಕಿ ರವಿ ಪೂಜಾರಿಯ ವಿಚಾರಣೆ ನಡೆಸಿದ್ದ ಸಿಸಿಬಿಯ 14 ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಮಂಗಳೂರಿನ ನ್ಯಾಯವಾದಿ ನೌಶಾದ್ ಕಾಶಿಂಜಿ ಕೊಲೆ ಹಾಗೂ ಖಾಸಗಿ ವಾಹಿನಿ ಮಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಿಂದ ಕರೆ ತಂದು ರವಿ ಪೂಜಾರಿಯ ವಿಚಾರಣೆ ನಡೆಸಲಾಗಿತ್ತು.
ಮಡಿವಾಳ ಬಳಿಯ ಎಫ್ಎಸ್ಎಲ್ ಕಚೇರಿಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ವಿಚಾರಣೆ ನಡೆಸಲಾಗಿತ್ತು. ಆದರೆ ಇದೀಗ ವಿಚಾರಣೆ ನಡೆಸಿದ್ದ ಎಸಿಪಿ, ಇನ್ಸ್ಪೆಕ್ಟರ್, ಟೈಪಿಸ್ಟ್ ಸೇರಿದಂತೆ 14 ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಸದ್ಯ ರವಿ ಪೂಜಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಈತನ ವಿಚಾರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ತನಿಖೆ ನಡೆಸಿದ ಅಧಿಕಾರಿಗಳು ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story