ಸಂಕಷ್ಟದ ಕಾಲದಲ್ಲಿ ನೀವು ಒಬ್ಬಂಟಿಯಲ್ಲ: ಕೊರೋನ ಸೋಂಕಿತರಿಗೆ ಧೈರ್ಯ ತುಂಬಿದ ಡಾ.ಪಿ.ಎಸ್.ಹರ್ಷ
ಬೆಂಗಳೂರು, ಆ. 11: ಸಂಕಷ್ಟದ ಕಾಲದಲ್ಲಿ ನೀವು ಒಬ್ಬಂಟಿಯಲ್ಲ, ಶೀಘ್ರವೇ ಗುಣಮುಖರಾಗುವಿರಿ, ಇಲಾಖೆ ತಮ್ಮ ಜೊತೆಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಕೊರೋನ ಸೋಂಕಿತ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧೈರ್ಯ ತುಂಬಿದರು.
ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರು ಹಾಗೂ ಹೊರಗುತ್ತಿಗೆ ಸಿಬ್ಬಂದಿ ಒಳಗೊಂಡಂತೆ 21 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಲಾಖೆ ಆಯುಕ್ತ ಡಾ.ಹರ್ಷ ಅವರು ನಗರದ ವಿವಿಧೆಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಝೂಮ್ ಸಮ್ಮೇಳನದ ಮೂಲಕ ಮಾತುಕತೆ ನಡೆಸಿ, ಆರೋಗ್ಯ ವಿಚಾರಿಸಿದರು.
ಸ್ವತಃ ವೈದ್ಯರೂ ಆಗಿರುವ ಡಾ.ಹರ್ಷ ಅವರು, ಕೊರೋನ ವೈರಸ್ ಸೋಂಕು ಕುರಿತು ಭಯಪಡುವ ಅಗತ್ಯವಿಲ್ಲ. ಅಂತೆಯೇ, ಈ ಸೋಂಕನ್ನು ಯಾರೂ ನಿರ್ಲಕ್ಷಿಸುವಂತೆಯೂ ಇಲ್ಲ. ಸಕಾಲಿಕ ಚಿಕಿತ್ಸೆ ಅತ್ಯಾವಶ್ಯಕ. ವೈದ್ಯರು ನೀಡುತ್ತಿರುವ ಔಷಧಿ ಹಾಗೂ ಮಾತ್ರೆಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಿ. ನಿಮ್ಮೊಂದಿಗೆ ಇಲಾಖೆ ಇದೆ ಎಂದು ಅವರು, ಸೋಂಕಿತರಿಗೆ ಭರವಸೆಯ ಮಾತುಗಳನ್ನು ಹೇಳಿದರು.