ಗಲಭೆಯ ಹಿಂದೆ ಯಾವ ಶಕ್ತಿ ಇದೆ ಎನ್ನುವುದನ್ನು ಪತ್ತೆ ಹಚ್ಚುತ್ತೇವೆ: ಸಚಿವ ಆರ್.ಅಶೋಕ್
"ಬೆಳಗ್ಗಿನ ಜಾವದೊಳಗೆ ಎಲ್ಲರನ್ನೂ ಬಂಧಿಸುತ್ತೇವೆ"
ಬೆಂಗಳೂರು, ಆ.12: ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇದು ಪೂರ್ವನಿಯೋಜಿತ ಕೃತ್ಯ ಎಂದೆನಿಸುತ್ತದೆ. ಸಾಮಾಜಿಕ ಜಾಲತಾಣದ ಪೋಸ್ಟ್ ಬಗ್ಗೆ ಕ್ರಮ ಕೈಗೊಳ್ಳಲು ಕಾನೂನಿದೆ. ಆದರೆ ಈ ರೀತಿ ಗಲಭೆ ನಡೆಸಬಾರದರು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನ ಕಾವಲ್ ಭೈರಸಂದ್ರದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಪೊಲೀಸ್ ಠಾಣೆಗೆ ನುಗ್ಗುವುದಾದರೆ ಇದರ ಹಿಂದೆ ದೊಡ್ಡ ತಂಡ ಇದೆ. ಯಾವ ಶಕ್ತಿ, ಯಾವ ಸಂಘಟನೆ ಇದರ ಹಿಂದೆ ಇದೆ ಎಂಬುವುದನ್ನು ಹೊರತರುತ್ತೇವೆ ಎಂದು ಅವರು ತಿಳಿಸಿದರು.
ಗಲಭೆಯ ಹಿಂದೆ ದೊಡ್ಡ ಗ್ಯಾಂಗ್ ಇದೆ. ಇವರೆಲ್ಲರೂ ದೇಶವಿರೋಧಿಗಳಂತೆ ವರ್ತಿಸುತ್ತಿದ್ದಾರೆ. ನಾವು ಖಂಡಿತವಾಗಿಯೂ ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟುತ್ತೇವೆ. ನಾವು ಸಂಪೂರ್ಣ ಅಧಿಕಾರವನ್ನು ಪೊಲೀಸರಿಗೆ ಅಧಿಕಾರ ನೀಡಿದ್ದೇವೆ. ಇದರ ಹಿಂದೆ ಬೇರೆ ಶಕ್ತಿಗಳಿವೆ. ಪೊಲೀಸ್ ಠಾಣೆಗೆ ನುಗ್ಗಬೇಕಾದರೆ ಇವರ ಹಿಂದೆ ಶಕ್ತಿ ಇದೆ ಎನಿಸುತ್ತದೆ. ಬೆಳಗ್ಗಿನ ಜಾವದೊಳಗೆ ಎಲ್ಲರನ್ನೂ ಬಂಧಿಸುತ್ತೇವೆ. ಇವರೆಲ್ಲರೂ ಕಳ್ಳರು, ಖದೀಮರು. ನ್ಯಾಯ ಬೇಕಿದ್ದರೆ ಮಾಧ್ಯಮಗಳ ಮುಂದೆ ಮಾತನಾಡಬೇಕಿತ್ತು. ಆದರೆ ಹಲ್ಲೆ ನಡೆಸಿದ್ದಾರೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಹಲವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.