ಬೆಂಗಳೂರು ಹಿಂಸಾಚಾರ: ಮುಖ್ಯಮಂತ್ರಿ, ಗೃಹ ಸಚಿವರ ರಾಜೀನಾಮೆಗೆ ದಸಂಸ ಒತ್ತಾಯ
ಬೆಂಗಳೂರು, ಆ. 15: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ, ಹಿಂಸಾಚಾರ ಮತ್ತು ದಲಿತ ಸಮುದಾಯದ ಶಾಸಕರೊಬ್ಬರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡಬೇಕು ಎಂದು ದಸಂಸ ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 74ನೆ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯಲ್ಲಿದ್ದೇವೆ. ಆದರೆ, ರಾಜ್ಯದಲ್ಲಿಂದಿನ ಪರಿಸ್ಥಿತಿಯ ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಕೆ.ಜಿ.ಹಳ್ಳಿ ಗಲಭೆ ಹೊಣೆಯನ್ನು ಗೃಹ ಇಲಾಖೆಯೆ ಹೊರಬೇಕು. ಘಟನೆಯಲ್ಲಿನ ತಪ್ಪಿತಸ್ಥರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಈ ಘಟನೆ ತನಿಖೆಯನ್ನು ಕೂಡಲೇ ಸಿಬಿಐಗೆ ವಹಿಸಬೇಕು. ಅಲ್ಲದೆ, ಘಟನೆಯ ಬಗ್ಗೆ ತನಿಖೆಗೂ ಮೊದಲೇ ವಿಪಕ್ಷಗಳ ವಿರುದ್ಧ ಆರೋಪದಲ್ಲಿ ತೊಡಗಿರುವ ಸಚಿವರುಗಳಿಗೆ ಕನಿಷ್ಟ ತಮ್ಮ ಸ್ಥಾನದ ಜವಾಬ್ದಾರಿ ಇಲ್ಲದಿರುವುದನ್ನು ನೋಡಿದರೆ ಈ ಕೃತ್ಯದ ಹಿಂದೆ ಮುನುವಾದಿ ಸಂಘಪರವಾರದ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತದೆ. ಆದುದರಿಂದ ಇದೊಂದು ಸರಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಅವರು ಟೀಕಿಸಿದ್ದಾರೆ.