ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ
ಬೆಂಗಳೂರು, ಆ.17: ಕ್ಷುಲ್ಲಕ ಕಾರಣಕ್ಕಾಗಿ ಯುವಕನೊರ್ವನ ಮೇಲೆ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ತಲ್ಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಲಘಟ್ಟಪುರದ ಮಲ್ಲಸಂದ್ರದಲ್ಲಿ ರವಿವಾರ ರಾತ್ರಿ ನಡೆದಿದ್ದು, ಪಳನಿ ಯಾನೆ ಮಣಿ(35) ಎಂಬಾತ ಕೊಲೆಯಾಗಿರುವ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.
ವೈಭವ್ ಸುಮುಖ್ ಲೇಔಟ್ನಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಈ ಕಟ್ಟಡ ಕಾರ್ಮಿಕರು ಗಾರೆ ಕೆಲಸ ಮಾಡಿ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ಪಳನಿ ಹಾಗೂ ಈತನ ಸ್ನೇಹಿತನ ನಡುವೆ ಮೊಬೈಲ್ ಚಾರ್ಜ್ ಮಾಡುವ ವಿಚಾರಕ್ಕೆ ರವಿವಾರ ರಾತ್ರಿ ಗಲಾಟೆ ನಡೆದಿದೆ. ಈ ವಿಚಾರವಾಗಿ ಇವರಿಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದಾಗ ಪಳನಿ ತಲೆಗೆ ಹೊಡೆದು, ಕೊಲೆಗೈದು ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story