ಸಿಎಂ ಅಧ್ಯಕ್ಷತೆಯಲ್ಲಿ ಸೆ.15ರಂದು ಸಚಿವ ಸಂಪುಟ ಸಭೆ
ಬೆಂಗಳೂರು, ಸೆ. 14: ಇದೇ ತಿಂಗಳ 21ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ನಾಳೆ(ಸೆ.15) ಬೆಳಗ್ಗೆ 11:30ಕ್ಕೆ ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳು ಪಾಲ್ಗೊಳ್ಳಲಿದ್ದು, ವಿರೋಧ ಪಕ್ಷಗಳ ವಿರುದ್ಧ ಸದನದಲ್ಲಿ ಯಾವ ರೀತಿಯ ತಿರುಗೇಟು ನೀಡಬೇಕೆಂಬ ಬಗ್ಗೆ ಚರ್ಚಿಸಲಿದ್ದು, ನಾಳಿನ ಸಚಿವ ಸಂಪುಟದ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸಾಮಾನ್ಯವಾಗಿ ವಾರಕ್ಕೊಮ್ಮೆ ಸಚಿವ ಸಂಪುಟ ಸಭೆ ನಡೆಯುವುದು ರೂಢಿ. ಆದರೂ ಕಳೆದ ವಾರ ಸಂಪುಟ ಸಭೆ ನಡೆಯಲಿಲ್ಲ.
ಈ ವಾರ ಸೆ.17ರ ಗುರುವಾರ ಮಹಾಲಯ ಅಮವಾಸ್ಯೆಯ ಸರಕಾರಿ ರಜೆ ಇರುವುದರಿಂದ ಗುರುವಾರದ ಬದಲಾಗಿ ನಾಳೆ ಸಂಪುಟ ಸಭೆ ನಡೆಸಲಾಗುತ್ತಿದೆ. ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಸಂಪುಟ ಸಭಾಂಗಣದ ಬದಲಾಗಿ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 334ರಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ.
Next Story