ಹಿರಿಯ ಪತ್ರಕರ್ತ, ರಂಗಕರ್ಮಿ ನಾಗರಾಜ್ ದೀಕ್ಷಿತ್ ನಿಧನ
ಬೆಂಗಳೂರು, ಸೆ.18: ಹಿರಿಯ ಪತ್ರಕರ್ತ ಹಾಗೂ ರಂಗಕರ್ಮಿಯಾಗಿದ್ದ ನಾಗರಾಜ್ ದೀಕ್ಷಿತ್(55) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದೀಕ್ಷಿತ್ ಅವರು 3 ದಶಕಗಳಿಗಿಂತಲೂ ಹೆಚ್ಚಿನ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದರು.
ರಂಗಕರ್ಮಿಯಾಗಿದ್ದ ಅವರು ಹಲವು ಪಾತ್ರಗಳನ್ನು ರಂಗದ ಮೇಲೆ ಸಮರ್ಥವಾಗಿ ನಿಭಾಯಿಸಿದ್ದರು. ದೀಕ್ಷಿತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವರ ನಿವಾಸದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಂಗಳೂರಿನ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.
ಮಂಡ್ಯದ ಪೌರವಾಣಿ, ಜನವಾಹಿನಿ, ಉಷಾಕಿರಣ, ದೂರದರ್ಶನ, ಜನಶ್ರೀ ಮತ್ತು ಟಿವಿ9ಯಲ್ಲಿ ಕೆಲಸ ನಿರ್ವಹಿಸಿದ್ದ ಅವರು, ತಮ್ಮದೇ ಆದ ಛಾಪು ಮೂಡಿಸಿದ್ದರು.
ಸಿಎಂ ಬಿಎಸ್ವೈರಿಂದ ಸಂತಾಪ: ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೀಕ್ಷಿತ್ ನಿಧನದಿಂದ ಮಾಧ್ಯಮರಂಗ ಪ್ರತಿಭಾವಂತರೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.