ಸಿನೆಮಾ ಸಾಹಿತ್ಯಕ್ಕೆ ಶೈಕ್ಷಣಿಕ ಶಿಸ್ತು ಅಗತ್ಯವಿದೆ: ಟಿ.ಎಸ್.ನಾಗಾಭರಣ
ಬೆಂಗಳೂರು, ಸೆ.18: ಸಿನೆಮಾ ಸಾಹಿತ್ಯಕ್ಕೆ ಶೈಕ್ಷಣಿಕ ಶಿಸ್ತಿನ ಕಲಿಕೆ ಅಗತ್ಯವಿದೆ. ಇದರಿಂದ ಅತ್ಯುತ್ತಮ ಸಿನೆಮಾಗಳನ್ನು ನಿರ್ಮಾಣ ಮಾಡುವುದರ ಮೂಲಕ ನಾಡಿನ ಸಾಂಸ್ಕೃತಿಕ ಲೋಕಕ್ಕೆ ಭದ್ರವಾದ ಬುನಾದಿ ರೂಪಿಸಲು ಸಾಧ್ಯವೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.
ಶುಕ್ರವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಹೊಸ ಹಾದಿ: ಹೊಸ ಹೆಜ್ಜೆ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿನೆಮಾ ಸಾಹಿತ್ಯ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಡಾ.ರಾಜ್ಕುಮಾರ್ ಕಾಲಘಟ್ಟದ ನಂತರ ತೆರೆಕಾಣುತ್ತಿರುವ ಬಹುತೇಕ ಸಿನೆಮಾಗಳಲ್ಲಿ ಮಚ್ಚು, ಲಾಂಗು ಪರಿಚಯಿಸುವ ಮೂಲಕ ಬೇಡವಾದ ವಿಷಯಗಳನ್ನು ವೈಭವೀಕರಿಸಲಾಗುತ್ತಿದೆ. ಇದು ಬದಲಾಗಬೇಕಾದರೆ ನಮ್ಮ ಸಾಂಸ್ಕೃತಿಕ ಲೋಕವನ್ನು ಅರಿಯುವಂತಹ, ತಿಳಿಯುವಂತಹ ಶೈಕ್ಷಣಿಕ ಮಾದರಿಯ ಕಲಿಕೆಯ ಶಿಸ್ತು ಸಿನೆಮಾ ಕ್ಷೇತ್ರಕ್ಕೆ ಅಗತ್ಯವಿದೆ ಎಂದು ತಿಳಿಸಿದರು.
ಸಿನೆಮಾ ಸಮಾಜದ ಕನ್ನಡಿಯಿದ್ದಂತೆ. ಸಮಾಜದಲ್ಲಿ ಸಂಭವಿಸುವ ಅಧಃಪತನಗಳು ಸಿನೆಮಾದಲ್ಲಿ ದೃಶ್ಯರೂಪದಲ್ಲಿ ಬಿತ್ತರಗೊಳ್ಳುವುದರಿಂದ ಜನತೆಗೆ ಬೇಗ ಅರಿವಿಗೆ ಬರುತ್ತದೆ. ಹೀಗಾಗಿ ಸಾರ್ವಜನಿಕ ಚರ್ಚೆಗೆ ಸಿನೆಮಾಗಳ ವಿಷಯಗಳೇ ಆದ್ಯತೆ ಆಗಿರುತ್ತದೆ. ಆದರೆ, ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಸಾಮಥ್ರ್ಯ ಸಿನೆಮಾ ಕ್ಷೇತ್ರಕ್ಕೆ ಇದೆ. ಇದು ಮುಂದಿನ ದಿನಗಳಲ್ಲಿ ಸಾಧ್ಯವಾಗಬಹುದೆಂಬ ಆಶಾಭಾವನೆ ನನಗಿದೆ ಎಂದು ಅವರು ಅಭಿಪ್ರಾಯಿಸಿದರು.
ಇವತ್ತಿನ ದೃಶ್ಯಮಧ್ಯಮವಾದ ಸಿನೆಮಾ, ಟೆಲಿವಿಷನ್, ಡಿಜಿಟಲ್ ಸಾಹಿತ್ಯಕ್ಕೆ ಹೊಸ ಪರಿಭಾಷೆಯನ್ನು ಹುಡುಕಿಕೊಳ್ಳಬೇಕಿದ್ದು, ಇದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಈ ಮೂರು ಮಾಧ್ಯಮಕ್ಕೆ ಶೈಕ್ಷಣಿಕ ಶಿಸ್ತನ್ನು ಕೊಟ್ಟರೆ ಹೊಸ ಸಾಧ್ಯತೆಗಳು ನಮ್ಮ ಮುಂದೆ ತೆರೆದುಕೊಳ್ಳಲಿದೆ ಎಂದು ಅವರು ಹೇಳಿದರು.
ಈ ವೇಳೆ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಅಕಾಡೆಮಿಯ ಸದಸ್ಯೆ ಛಾಯಾ ಭಗವತಿ, ರಿಜಿಸ್ಟ್ರಾರ್ ಕರಿಯಪ್ಪ ಮತ್ತಿತರರಿದ್ದರು.