ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟ: ಈಶ್ವರಪ್ಪ ನಿವಾಸದಲ್ಲಿ ಮುಖಂಡರ ಪೂರ್ವಭಾವಿ ಸಭೆ
ಬೆಂಗಳೂರು, ಸೆ.27: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಅನುಸರಿಸಬೇಕಾದ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು ರವಿವಾರ ಬೆಂಗಳೂರಿನಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಕುರುಬ ಸಮಾಜದ ನಾಯಕರ ಸಭೆ ಜರುಗಿತು.
ಕಾಗಿನೆಲೆ ಗುರುಪೀಠದ ಮಹಾಸ್ವಾಮಿ ಶ್ರೀ ನಿರಂಜನಾನಂದಪುರಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಸಂಬಂಧ ನಡೆಯುವ ಹೋರಾಟಕ್ಕೆ ರಾಜ್ಯ ಮಟ್ಟದ ಸಮಿತಿ ರಚನೆ ಮಾಡಿ ಅದರ ನೇತೃತ್ವವನ್ನು ಗುರುಪೀಠಕ್ಕೆ ನೀಡಿದರೆ ಅದರ ಮುಂದಾಳತ್ವ ವಹಿಸಿ ತಮ್ಮೆಲ್ಲರ ಸಹಕಾರದೊಂದಿಗೆ ಅದರ ಸಾಕಾರದತ್ತ ಕ್ರಿಯಾಶೀಲ ಹೋರಾಟ ಮಾಡಲಾಗುವುದು ಎಂದರು.
ನಾವು ಹೋರಾಟವನ್ನು ವ್ಯವಸ್ಥಿತವಾಗಿ ಮತ್ತು ನೇರ ದೃಷ್ಟಿಯಿಂದ ಮಾಡಬೇಕಾಗುತ್ತದೆ. ಈ ಹೋರಾಟಕ್ಕೆ ಸಮಾಜದ ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಈಗಾಗಲೇ ಈ ವಿಷಯದ ಕುರಿತು ಚರ್ಚಿಸಲಾಗಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ ಇರುವುದರಿಂದ ಅದೂ ಕೂಡ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಆ ಸಮುದಾಯದವರು ಪಾದಯಾತ್ರೆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದರು. ಅದರಿಂದಾಗಿ, ಸರಕಾರ ಅವರ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ತೀರ್ಮಾನಕ್ಕೆ ಮುಂದಾಗಿದೆ. ಅದೇ ರೀತಿ ನಾವು ಹೋರಾಟ ರೂಪಿಸಬೇಕು ಎಂದು ಅವರು ಕರೆ ನೀಡಿದರು.
ರಾಜ್ಯದಲ್ಲಿ ಅವರಂತೆ ಪಾದಯಾತ್ರೆ ಮಾಡಬೇಕು. ಸಮುದಾಯದಿಂದ ಶಕ್ತಿ ಪ್ರದರ್ಶನ ಆಗಬೇಕು. ಇಲ್ಲವಾದಲ್ಲಿ ಯಾವುದೇ ಸರಕಾರಗಳು ಬಗ್ಗೋದಿಲ್ಲ. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಹೋರಾಟ ಮಾಡಬೇಕು. ನಮ್ಮ ಉದ್ದೇಶ ನಮ್ಮ ಸಮುದಾಯ ಎಸ್ಟಿಗೆ ಸೇರಿಸಬೇಕು ಅನ್ನೋದು, ಹೀಗಾಗಿ ಪಾದಯಾತ್ರೆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಅವರು ಕರೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇವತ್ತು ಸಮುದಾಯದ ಸ್ವಾಮೀಜಿಗಳು, ಎಲ್ಲ ಪಕ್ಷಗಳ ಪ್ರಮುಖರು, ಸಂಘಟನೆಗಳು ಸಭೆ ಸೇರಿ, ಕುರುಬ ಸಮಾಜವನ್ನು ಎಸ್ಟಿ ವರ್ಗಕ್ಕೆ ಸೇರಿಸುವ ಸಂಬಂಧ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ನಿರ್ಧಾರ ಮಾಡಿದ್ದೇವೆ ಎಂದರು.
ಇದಕ್ಕಾಗಿ ಹೋರಾಟದ ರೂಪುರೇಷೆಗಳು, ಕಾರ್ಯಕ್ರಮಗಳ ಬಗ್ಗೆ ನಿಗದಿ ಮಾಡುತ್ತೇವೆ. ಸ್ವಾಮೀಜಿಗಳ ಸಲಹೆಯಂತೆ ಹೋರಾಟದ ರೂಪುರೇಷೆ ನಿಗದಿ ಮಾಡಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಹಾಗೂ ವಿಧಾನ ಪರಿಷತ್ ಸದಸ್ಯ ರಘುನಾಥ್ ರಾವ್ ಮಲ್ಕಾಪುರೆ, ಮಾಜಿ ಮೇಯರ್ ಗಳಾದ ಡಿ.ವೆಂಕಟೇಶಮೂರ್ತಿ, ರಾಮಚಂದ್ರಪ್ಪ, ಶಿವಮೊಗ್ಗ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಈ.ಕಾಂತೇಶ, ಅಹಿಂದ ನಾಯಕರಾದ ಕೆ.ಮುಕುಡಪ್ಪ, ಟಿ.ಬಿ.ಬಳಗಾವಿ, ಪುಟ್ಟಸ್ವಾಮಿ ಮತ್ತು ಆನೇಕಲ್ ದೊಡ್ಡಯ್ಯ, ರಾಜ್ಯ ಕುರುಬರ ಸಂಘದ ಪದಾಧಿಕಾರಿಗಳು, ಸಂಘ ಸಂಸ್ಥೆಯ ಮುಖಂಡರು ಮುಂತಾದವರು ಭಾಗವಹಿಸಿದ್ದರು.