ಒಕ್ಕೂಟ ವ್ಯವಸ್ಥೆಯ ಬಗ್ಗೆಅನುಮಾನ ಕಾಡುತ್ತಿದೆ
ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ದೇವೇಗೌಡ ಆಕ್ರೋಶ
ತುಮಕೂರು, ಸೆ.25: ರಾಜ್ಯಗಳ ನಡುವೆ ನೀರಾವರಿ ಸಮಸ್ಯೆ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಾಗಲೂ ಕೇಂದ್ರ ಸರಕಾರ ಮಧ್ಯಪ್ರವೇಶಿಸದಿರುವುದನ್ನು ನೋಡಿದರೆ ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಗವಿರಂಗ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಾವೇರಿ ವಿವಾದದಿಂದ ಕರ್ನಾಟಕ-ತಮಿಳುನಾಡು ಎರಡು ರಾಜ್ಯಗಳ ನಡುವೆ ಬಿಕ್ಕಟ್ಟು ಏರ್ಪಟ್ಟಿದೆ. ಈ ಹಿಂದೆ ಇದೇ ರೀತಿ ಸಮಸ್ಯೆಗಳು ಉಂಟಾದಾಗ ಆಗಿನ ಪ್ರಧಾನಿಗಳು ಮಧ್ಯಪ್ರವೇಶಿಸಿ ಪರಿಹಾರ ಸೂಚಿಸಿರುವ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ. ನಾನೂ ಕೂಡ ಪ್ರಧಾನಿಯಾದಾಗ ಇಂತಹ ಹಲವಾರು ಪ್ರಕರಣಗಳನ್ನು ಬಗೆಹರಿಸಿದ್ದೇನೆ. ಆದರೆ, ಇಂದಿನ ಪ್ರಧಾನಿ ಮಧ್ಯಪ್ರವೇಶಕ್ಕೆ ನಿರಾಕರಿಸುತ್ತಿದ್ದಾರೆ. ಇದರ ಒಳ ಮರ್ಮವೇನು ಎಂದು ರಾಜ್ಯದ ಜನತೆ ತಿಳಿಯಬೇಕಾಗಿದೆ ಎಂದರು.
ಪ್ರಧಾನಿ ಮಧ್ಯಪ್ರವೇಶಿಸದಿರುವ ಬಗ್ಗೆ ಈಗ ಮಾತನಾಡುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಈ ವಿಚಾರವಾಗಿ ಮಾತನಾಡಲಿದ್ದೇನೆ ಎಂದ ದೇವೇಗೌಡರು, ನ್ಯಾಯಾಲಯದಲ್ಲಿ ತೀರ್ಪು ನೀಡುವಾಗ ರಾಜ್ಯದ ನೀರಿನ ಪರಿಸ್ಥಿತಿ ಕುರಿತು ವಾಸ್ತವಾಂಶ ತಿಳಿದಿಲ್ಲ. ಯಾವ ಆಧಾರದ ಮೇಲೆ ಮೇಲುಸ್ತುವಾರಿ ಸಮಿತಿ ಮತ್ತು ನ್ಯಾಯಾಲಯ ತೀರ್ಪು ನೀಡಿದೆ ಎಂಬುದು ತಿಳಿಯದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಾವೇರಿ ನ್ಯಾಯಮಂಡಳಿ ನೀಡಿರುವ ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ತುಂಬಾ ಅನ್ಯಾಯವಾಗಿದೆ. ರಾಜ್ಯ ವಿಧಾನಮಂಡಲದಲ್ಲಿ ಕಾವೇರಿ ವಿವಾದದಲ್ಲಿ ತೆಗೆದುಕೊಂಡ ತೀರ್ಪಿನ ಕುರಿತು ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿಯೊಬ್ಬರು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದ್ದಾರೆ. ನಾವು ಜನರಿಗೆ ಕುಡಿಯುವ ನೀರು ಕೊಟ್ಟಿದ್ದೇವೇ ಹೊರತು ಬೇರೆ ಯಾವುದೇ ಕೆಟ್ಟ ಕೆಲಸ ಮಾಡಿಲ್ಲ. ತಮಿಳುನಾಡಿನವರು 3ನೆ ಬೆಳೆಗೆ ನೀರು ಕೇಳುತ್ತಿದ್ದಾರೆ. ನಮಗೆ ಕುಡಿಯಲು ನೀರಿಲ್ಲ, ಇಂತಹ ಸ್ಥಿತಿಯಲ್ಲಿ ಬಂದಿರುವ ಎರಡು ತೀರ್ಪುಗಳ ಹಿಂದಿನ ಮಾನದಂಡ ಏನು ಎಂಬುದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೇಮಾವತಿ ಡ್ಯಾಂ ಕಟ್ಟುವಾಗ 6.50 ಲಕ್ಷ ಹೆಕ್ಟೇರ್ಗೆ ನೀರುಣಿಸುವ ಗುರಿಯನ್ನು ಹೊಂದಲಾಗಿತ್ತು. ಆದರೆ, ತಮಿಳುನಾಡಿನ ಕಿತಾಪತಿಯಿಂದ ಇದು ಸಾಧ್ಯವಾಗಿಲ್ಲ. ಕೆರೆಯ ಹಿಂದೆ ಒಂದಷ್ಟು ಬೆಳೆ ಹಾಕಿರುವುದನ್ನು ಬಿಟ್ಟರೆ ಬೇರೆಲ್ಲಿಯೂ ಬೆಳೆ ಹಾಕಿಲ್ಲ. ಇದೇ ರೀತಿ ಸ್ಥಿತಿ ಮುಂದುವರಿದರೆ ರಾಜ್ಯ ಮರುಭೂಮಿಯಾಗಲಿದೆ ಎಂದು ಎಚ್ಚರಿಸಿದ ಅವರು, ಅ.18ರ ಸುಪ್ರೀಂಕೋರ್ಟ್ನ ವಿಚಾರಣೆ ಬಗ್ಗೆ ರಾಜ್ಯ ಸರಕಾರ ಹೆಚ್ಚಿನ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಕಾವೇರಿ ವಿವಾದದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ. ಇದರ ನಿವಾರಣೆ ನಿಟ್ಟಿನಲ್ಲಿ ದೇವೇಗೌಡರ ಸಲಹೆ ಬಹಳ ಉಪಯುಕ್ತವಾಗಿದೆ. ಕಾವೇರಿಯಿಂದ ಮಂಡ್ಯಕ್ಕೆ ಎಷ್ಟು ತೊಂದರೆಯಾಗಿದೆಯೋ ಅಷ್ಟೇ ತೊಂದರೆ ತುಮಕೂರು ಜಿಲ್ಲೆಗೂ ಆಗಿದೆ. ಆದ್ದರಿಂದ ನಮಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದೆ. ನ್ಯಾಯಾಂಗದ ಮೇಲೆ ಜನರಲ್ಲಿ ಇನ್ನೂ ನಂಬಿಕೆಯಿದೆ. ಆದರೆ, ಅದನ್ನು ಕಳೆದುಕೊಳ್ಳುವ ಹಾಗೆ ತೀರ್ಪುಗಳು ಬರುತ್ತಿರುವುದು ದುರದೃಷ್ಟಕರ ಎಂದರು.ಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಿಶ್ವ ಒಕ್ಕಲಿಗ ಮಹಾಸಂಸ್ಥಾನಮಠದ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಸ್.ಆರ್.ಶ್ರೀನಿವಾಸ್, ಎಂಎಲ್ಸಿ ಬೆಮಲ್ ಕಾಂತರಾಜು, ಡಿ.ಸಿ.ಗೌರಿಶಂಕರ್, ನರಸೇಗೌಡ, ಕೆ.ಬಿ.ಬೋರೇಗೌಡ, ದೇವಿಕಾ, ಆಡಿಟರ್ ನಾಗರಾಜು, ಜಿಲ್ಲಾ ಒಕ್ಕಲಿಗರ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷ ವಿಶ್ವೇಶ್ವರಯ್ಯ, ಬೋರೇಗೌಡ, ಕಾರ್ಯದರ್ಶಿ ಬೆಳ್ಳಿಲೋಕೇಶ್, ಸಹ ಕಾರ್ಯದರ್ಶಿ ಜಿ.ಶಿವಣ್ಣ, ಖಜಾಂಚಿ ಟಿ.ಪುಟ್ಟಸ್ವಾಮಿ, ನಿರ್ದೇಶಕರಾದ ಹನುಮಂತೇಗೌಡ, ಪುಟ್ಟಸಾಮಯ್ಯ, ಡಿ.ಎಚ್.ಲಕ್ಷ್ಮಯ್ಯ, ಕೃಷ್ಣಮೂರ್ತಿ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾನೂನು ಸಚಿವರಿಗೆ ಸಲಹೆ
ಕಾನೂನು ಬಿಕ್ಕಟ್ಟು ಉಂಟಾದಾಗ ಅತ್ಯಂತ ಎಚ್ಚರಿಕೆ ಹೆಜ್ಜೆಯನ್ನು ಇಡಬೇಕಾದವರು ಕಾನೂನು ಮಂತ್ರಿಗಳು. ಕಾವೇರಿ ವಿವಾದದಲ್ಲಿ ಕಾನೂನು ಮಂತ್ರಿ ಮತ್ತು ನೀರಾವರಿ ಮಂತ್ರಿಗಳು ಒಗ್ಗೂಡಿ ಕೆಲಸ ಮಾಡಬೇಕು. ನ್ಯಾಯಾಲಯದ ಕಲಾಪಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕಾನೂನು ಮಂತ್ರಿಗಳು ರಾಜ್ಯದ ಜನತೆಯ ಮುಂದಿಡಬೇಕು. ಆದರೆ, ಕಾನೂನು ಮಂತ್ರಿಗಳು ಈ ವಿಚಾರದಲ್ಲಿ ಹಿಂದೆ ಸರಿದಿದ್ದಾರೆ ಎಂದು ಕಂಡು ಬರುತ್ತಿದೆ. ಮುಂದೆಯಾದರೂ ಎರಡೂ ಇಲಾಖೆಯವರು ಜೊತೆಯಲ್ಲಿ ಕೆಲಸ ಮಾಡಿ ಎಂದು ವೇದಿಕೆಯಲ್ಲಿದ್ದ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಸಲಹೆ ನೀಡಿದರು.