ನೋಟು ಅಮಾನ್ಯದ ವಿರುದ್ಧ ಎಸ್ಡಿಪಿಐ, ಸಿಪಿಐ ಎಂ.ಎಲ್ ಪಕ್ಷಗಳಿಂದ ವಿಚಾರಗೋಷ್ಠಿ
ಬೆಂಗಳೂರು, ಜ.26: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-(ಸಿಪಿಐ ಎಂ.ಎಲ್.) ಪಕ್ಷಗಳ ಜಂಟಿ ಆಶ್ರಯದಲ್ಲಿ ನೋಟು ಅಮಾನ್ಯದ ವಿರುದ್ಧ ಬೆಂಗಳೂರಿನ ಫ್ರೇಝರ್ಟೌನ್ನಲ್ಲಿ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನ್ಯಾಯವಾದಿ ಎಸ್.ಬಾಲನ್ ಮಾತನಾಡಿ, ನೋಟು ನಿಷೇಧದಿಂದ ಬಡವರಿಗೆ ತುಂಬಾತೊಂದರೆಯಾಗಿದೆ. ಮೋದಿ ಸರಕಾರ ಶ್ರೀಮಂತ ವ್ಯಾಪಾರಿಗಳ ಪರವಾಗಿದೆ. ಸರಕಾರದ ಜನರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದರೆ ಅವರ ವಿರುದ್ಧ ಕರಾಳ ಕಾನೂನಿನಡಿಯಲ್ಲಿ ಕೇಸು ದಾಖಲಾಗುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕಾರಿ ಹಂತಕ್ಕೆ ತಲುಪಿದೆ ಎಂದರು.
ಎಸ್ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಡಾ.ಮೆಹಬೂಬ್ ಅವಾದ್ ಶರೀಫ್ ಮಾತನಾಡಿ, ದೇಶದ ದಲಿತರು, ಕೂಲಿ ಕಾರ್ಮಿಕರ, ರೈತರ, ಮುಸ್ಲಿಮರ ಮೊದಲಾದ ಬಡ ಸಮುದಾಯಗಳಿಗೆ ನೋಟು ನಿಷೇಧದಿಂದ ತೀವ್ರ ಸಂಕಷ್ಟವಾಗಿದೆ. ಬಿ.ಜೆ.ಪಿ. ಸುಳ್ಳು ಆಶ್ವಾಸನೆಗಳನ್ನು ನೀಡಿ ದೇಶದ ಜನರನ್ನು ವಂಚಿಸಿದೆ. ದೇಶದ ಪರಿಸ್ಥಿತಿ ಅಪಾಯಕಾರಿಯಾಗಿದೆ. ಕೋಮುವಾದಿ ಶಕ್ತಿಗಳು ಬಲಿಷ್ಠವಾಗುತ್ತಿದ್ದು, ದೇಶದ ಸಹಧರ್ಮ, ಸಂಸ್ಕೃತಿಗೆ ಸವಾಲಾಗಿದ್ದಾರೆ ಎಂದರು.
ಎಸ್ಡಿಪಿಐ, ಸಿ.ಪಿ.ಐ ಪಕ್ಷಗಳ ಮುಖಂಡರಾದ ಕ್ಲಿಪ್ಫನ್ರೂಸಾರಿಯಾ, ನರಸಿಂಹ ಮೂರ್ತಿ, ಅಕ್ರಂ ಹಸನ್, ಫಯಾಝ್ ಅಹ್ಮದ್, ಮುಹಮ್ಮದ್ ಜಾವಿದ್ ಆಝಂ, ಬಿಬಿಎಂಪಿ ಕಾರ್ಪೊರೇಟರ್ ಮುಜಾಹಿದ್ ಪಾಶಾ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.