ಸಿದ್ದರಾಮಯ್ಯರ ಗೊಡ್ಡು ಬೆದರಿಕೆಗೆ ಹೆದರಲ್ಲ: ಬಿಎಸ್ವೈ
ರಾಜ್ಯ ಸರಕಾರದ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ
ಬೆಂಗಳೂರು, ಫೆ.20: ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ನಿರತರವಾಗಿದೆ ಮತ್ತು ಆಡಳಿತದಲ್ಲಿ ವೈಫಲ್ಯ ಅನುಭವಿಸಿದೆ ಎಂದು ಆರೋಪಿಸಿರುವ ಬಿಜೆಪಿ ಇದರ ವಿರುದ್ಧ ನಗರದ ಪುರಭವನದ ಎದುರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿಮ ಇದೇ ವಿಧಾನಸೌಧದಲ್ಲಿ ಕುಳಿತು ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿ, ಅವರನ್ನು ಜೈಲಿಗೆ ಕಳುಹಿಸುತ್ತೇನೆ. ಇದು ಸಿದ್ದರಾಮಯ್ಯ ರಿಗೆ ನನ್ನ ಸವಾಲು. ಅದೇರೀತಿ ಗೋವಿಂದರಾಜು ಡೈರಿ ಬಗ್ಗೆ ಆರೋಪ ಸಾಬೀತಾಗದೇ ಇದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ಬಿಬಿಎಂಪಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಗ್ರಹಿಸಿರುವ ಮೂರೂವರೆ ಸಾವಿರ ಕೋಟಿ ರೂ. ಪಾಲಿಕೆಗೆ ಜಮೆ ಆಗಿಲ್ಲ. ಈ ಸಂಬಂಧ ನಾನು ಕೂಡ ಆಯುಕ್ತರಿಗೆ ಪತ್ರ ಬರೆಯುತ್ತೇನೆ. ಇಂತಹ ಹಲವು ದಾಖಲೆ ಮಾಹಿತಿಗಳು ನಮ್ಮ ಬಳಿ ಇದರ. ಈ ಸಂಬಂಧ ಕರ ಪತ್ರ ಮಾಡಿ ಹಂಚುತ್ತೇವೆ. ಅದನ್ನು ಇಟ್ಟುಕೊಂಡು ಪಾಲಿಕೆಯಲ್ಲಿ ಹೋರಾಟ ಮಾಡುತ್ತೇನೆ.
ನಮ್ಮಸರ್ಕಾರ ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ವರ್ಗದ ಎಲ್ಲ ಹಗರಣಗಳ ತನಿಖೆಗೆ ಆದೇಶಿಸುತ್ತೇವೆ. ನಾನು ಸಿದ್ದರಾಮಯ್ಯ ಅವರ ಗೊಡ್ಡು ಬೆದರಿಕೆಗೆ ಹೆದರಲ್ಲ ಯಡಿಯೂರಪ್ಪ ನುಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಆರ್.ಅಶೋಕ್, ಶೋಭಾ ಕರಂದ್ಲಾಜೆ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.