ಯುವ ಸಮುದಾಯದಿಂದ ಹೊಸ ಚಿಂತನೆಗಳು ರೂಪುಗೊಳ್ಳಲಿ: ಯೋಗೇಶ್ ಮಾಸ್ಟರ್
"ದೀವಟಿಗೆ' ಕೈ ಬರಹ ಪತ್ರಿಕೆಯ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ
ಬೆಂಗಳೂರು, ಎ. 8: ಇಂದಿನ ಸಮಾಜದಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ರ ಚಿಂತನೆಗಳನ್ನು ಅರ್ಥೈಸಿಕೊಂಡು, ಕಾಲ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಹೊಸ ಚಿಂತನೆಗಳು ರೂಪುಗೊಳ್ಳಬೇಕು ಎಂದು ಸಾಹಿತಿ ಹಾಗೂ ಲೇಖಕ ಯೋಗೇಶ್ ಮಾಸ್ಟರ್ ಅಭಿಪ್ರಾಯಿಸಿದ್ದಾರೆ.
ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ "ದೀವಟಿಗೆ" ಕೈ ಬರಹ ಪತ್ರಿಕೆಯ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಇತ್ತೀಚಿಗೆ ಯುವ ಸಮುದಾಯ ಒಂದು ಮುಖವಾಡ ತೊಟ್ಟುಕೊಂಡು ಬದುಕುತ್ತಿದ್ದಾರೆ. ಯುವಜನರು ಬುದ್ಧ, ಅಂಬೇಡ್ಕರ್, ಬಸವ, ಪೆರಿಯಾರ್ರ ಚಿಂತನೆಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಅವರ ಕಾಲಘಟ್ಟ ಮುಗಿದು, ಹೊಸ ಚಿಂತನೆಗಳು ಚಿಗುರುತ್ತವೆ ಎಂದು ಹೇಳಿದರು.
ಸಮಾಜದ ಮುಖ್ಯವಾಹಿನಿಯಲ್ಲಿರುವ ಮುದ್ರಣ ಮಾಧ್ಯಮಕ್ಕಿಂತ ಭಿನ್ನವಾಗಿ, ಯಾವುದೇ ಮಾಧ್ಯಮದಲ್ಲಿ ಪ್ರಕಟ ಮಾಡಲಾಗದಂತಹ ಬರಹಗಳನ್ನು ಕೈ ಬರಹದ ಮೂಲಕ ಯುವ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಅಲ್ಲದೆ, ದೀವಟಿಗೆ ಪತ್ರಿಕೆ ತನ್ನದೇ ಆದ ನೆಲೆಯನ್ನು ಹುಡುಕಿಕೊಂಡು, ಹೊಸ ಸಮಾಜ ನಿರ್ಮಾಣ ಮಾಡುವ ಕಡೆಗೆ ಸಾಗುತ್ತಿದೆ. ಸಮಾಜದಲ್ಲಿ ಮರೆಯಾಗುತ್ತಿರುವ ಬೆಳಕನ್ನು ಈ ಪತ್ರಿಕೆಯು ಬೆಳಗಬೇಕು ಎಂದು ಅವರು ಆಶಿಸಿದರು.