ಎಂಬಿಬಿಎಸ್ ಸೀಟು ನೀಡುವ ವಿಚಾರ: ಅ.ದೇವೇಗೌಡ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ.
ಬೆಂಗಳೂರು, ಎ 27: ತಮ್ಮ ಮೊಮ್ಮಗಳಿಗೆ ಎಂಬಿಬಿಎಸ್ ಸೀಟು ನೀಡುವುದಕ್ಕಾಗಿ ಪಟ್ಟಿಯಲ್ಲಿದ್ದ ವಿದ್ಯಾರ್ಥಿ ಹೆಸರು ಕೈಬಿಡಲು ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅ.ದೇವೇಗೌಡ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ಈ ಕುರಿತು ಅ.ದೇವೇಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ವಕೀಲ ಎ.ವಿ.ನಿಶಾಂತ್, ದೇವೇಗೌಡ ವಿರುದ್ಧ ಕೆ.ಆರ್.ಚೌಧರಿ ಎಂಬುವರು ದಾಖಲಿಸಿರುವ ದೂರು ಆಧಾರರಹಿತ. ದೋಷಾರೋಪ ಪಟ್ಟಿಯಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಸಾಕ್ಷಗಳಿಲ್ಲ. ಹೀಗಾಗಿ, ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದರು.
ನನ್ನ ಪುತ್ರ ಕೆ.ಆರ್.ಗಿರೀಶ್ಗೆ ಕಿಮ್ಸ್(ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಕಾಲೇಜಿನಲ್ಲಿ 2015-16ನೇ ಸಾಲಿನಲ್ಲಿ ಸೀಟು ಲಭ್ಯವಾಗಿತ್ತು. ಆದರೆ ಅಂತಿಮ ಗಳಿಗೆಯಲ್ಲಿ ದೇವೇಗೌಡ ತಮ್ಮ ಮೊಮ್ಮಗಳು ಲೇಖಶ್ರೀಗೆ ಸೀಟು ದೊರಕಿಸಿಕೊಡುವ ಕಾರಣ ಗಿರೀಶ್ ಹೆಸರು ಕೈಬಿಟ್ಟಿದ್ದರು ಎಂದು ಆರೋಪಿಸಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.