ಬಿಎಸ್ವೈ-ಈಶ್ವರಪ್ಪ ಗುದ್ದಾಟ: ಕೆಲಸ ಕಳೆದುಕೊಂಡ ಟೈಪಿಸ್ಟ್
ಬೆಂಗಳೂರು, ಎ. 28: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಬಿಜೆಪಿ ಕಚೇರಿ ಸಿಬ್ಬಂದಿಯೊಬ್ಬ ಕೆಲಸ ಕಳೆದುಕೊಳ್ಳುವಂತಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಬೆಂಬಲಿಗ, ಹಾವೇರಿ ಜಿಲ್ಲೆ ಬ್ಯಾಡಗಿ ಮೂಲದ ಮಲ್ಲಿಕಾರ್ಜುನ್ ಎಂಬವರನ್ನು ಪಕ್ಷದ ಕಚೇರಿಯಿಂದ ಹೊರ ಹಾಕುವಂತೆ ಯಡಿಯೂರಪ್ಪ ಕಟ್ಟಪ್ಪಣೆ ಮಾಡಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ್ ಕೆಲಸ ಕಳೆದುಕೊಂಡಿದ್ದಾರೆ.
ಮಲ್ಲಿಕಾರ್ಜುನ್ ಹತ್ತು ವರ್ಷಗಳಿಂದ ಪಕ್ಷದ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ಸಂತೋಷ್ ಬೆಂಬಲಿಗನಾಗಿದ್ದರು. ಭಿನ್ನಮತೀಯರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದುದಲ್ಲದೆ, ‘ಸಂಘಟನೆ ಉಳಿಸಿ’ ಸಮಾವೇಶದ ನಿರ್ಣಯಗಳನ್ನು ಪಕ್ಷದ ಕಚೇರಿಯಿಂದಲೇ ಸಿದ್ಧಪಡಿಸಿ ಕಳುಹಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯ ಇದು ಯಡಿಯೂರಪ್ಪನವರ ಕಿವಿಗೆ ಬಿದ್ದ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸುವಂತೆ ಸೂಚಿಸಿದ್ದಾರೆ.
‘ಮಲ್ಲಿಕಾರ್ಜುನ್ ತಡರಾತ್ರಿವರೆಗೂ ಪಕ್ಷದ ಕಚೇರಿಯಲ್ಲಿದ್ದು, ಸಿಐಡಿ ಕೆಲಸ ಮಾಡುತ್ತಿದ್ದ. ಆತನ ನಡವಳಿಕೆ ಸರಿಯಿರಲಿಲ್ಲ. ಇದು ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆತನಿಗೆ "ನಾಳೆಯಿಂದ ನೀನು ಕೆಲಸಕ್ಕೆ ಬರಬೇಡ" ಎಂದು ಸೂಚಿಸಿದ್ದೇನೆ. ಇದರಲ್ಲಿ ವಿಶೇಷವೇನಿಲ್ಲ, ದೊಡ್ಡದು ಮಾಡುವ ಅಗತ್ಯವಿಲ್ಲ’
-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ