ಸುಪ್ರಿಂಕೋರ್ಟ್ ತೀರ್ಪಿನ ವಿರುದ್ಧ ಸುಗ್ರಿವಾಜ್ಞೆ ಹೊರಡಿಸುವಂತೆ ಆಗ್ರಹಿಸಿ ಮೇ 18 ರಂದು ಧರಣಿ
ಬೆಂಗಳೂರು, ಮೇ 15: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರಿಗೆ ಮುಂಭಡ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮುಂದಿಟ್ಟುಕೊಂಡು ಹಿಂಭಡ್ತಿ ನೀಡಲು ಮುಂದಾಗಬಾರದು ಹಾಗೂ ಮುಂಭಡ್ತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿ ಮೇ 18 ರಂದು ದಲಿತ ಸಂಘರ್ಷ ಸಮಿತಿ ನಗದ ಪುರಭವನದ ಎದುರು ಧರಣಿ ಹಮ್ಮಿಕೊಂಡಿದೆ.
ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ದಲಿತ ನೌಕರರಿಗೆ ಮಾರಕವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಬೇಕು. ಜೊತೆಗೆ, ಸಾಮಾಜಿಕ ನ್ಯಾಯ ಪ್ರತಿಪಾದಿಸುವ ರಾಜ್ಯ ಸರಕಾರ ಈ ಕುರಿತು ಸುಗ್ರೀವಾಜ್ಞೆ ಹೊರಡಿಸಿ ದಲಿತ ನೌಕರರನ್ನು ಕಾಪಾಡಬೇಕು ಎಂದು ಸಮಿತಿಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸರಕಾರ ಮೀಸಲಾತಿ ಜಾರಿ ಮಾಡುವ ಕುರಿತು ಹಲವು ನಿರ್ದಿಷ್ಟ ಕ್ರಮಗಳನ್ನು ಅನುಸರಿಸಿಕೊಂಡು ಬಂದಿದೆ. ಉದ್ಯೋಗ, ಶಿಕ್ಷಣ, ರಾಜಕೀಯದಲ್ಲಿ ಮೀಸಲಾತಿ ನೀಡಲಾಗಿದೆ. ಇದೇ ವೇಳೆ ಸಂವಿಧಾನದ 85 ನೆ ಪರಿಚ್ಛೇದನ ತಿದ್ದುಪಡಿ ಮಾಡುವ ಮೂಲಕ ಉದ್ಯೋಗದ ಪ್ರತಿ ಹಂತದಲ್ಲಿ ಮೀಸಲಾತಿ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಅನೇಕ ಚರ್ಚೆಗಳು ನಡೆದ ನಂತರ ಅಂತಿಮವಾಗಿ ಸರಕಾರ ಇದನ್ನು ಅಂಗೀಕರಿಸಿದೆ ಎಂದು ಅವರು ಹೇಳಿದರು.
ಈ ಸಂದರ್ಭ ವಿಚಾರವಾದಿ ಜಿ.ಕೆ.ಗೋವಿಂದರಾವ್, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ಎಂ.ವಿ.ನರಸಿಂಹಯ್ಯ, ಇಂದಿರಾ ಕೃಷ್ಣಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.