ಮಾಧ್ಯಮ ಕಾರ್ಯಾಗಾರಕ್ಕೆ ಈಶ್ವರಪ್ಪ ಗೈರು: ಬಾಹುಬಲಿ ಸಿನಿಮಾಗೆ ಹಾಜರು..!
ಬೆಂಗಳೂರು, ಮೇ 28: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರಕ್ಕೆ ಗೈರು ಹಾಜರಾಗಿ, ಕುಟುಂಬದ ಸದಸ್ಯರೊಂದಿಗೆ ಬಾಹುಬಲಿ-2 ಚಿತ್ರ ವೀಕ್ಷಣೆ ಮಾಡಿದರು.
ಯಶವಂತಪುರ ಸಮೀಪದಲ್ಲಿನ ಒರಾಯನ್ ಮಾಲ್ಗೆ ಬೆಳಗ್ಗೆ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ ಈಶ್ವರಪ್ಪ, ಬಾಹುಬಲಿ-2 ಸಿನಿಮಾ ವೀಕ್ಷಿಸಿದರು. ಅಲ್ಲದೆ, ಬಾಹುಬಲಿ ಸಿನೆಮಾ ಬಹಳ ಚೆನ್ನಾಗಿದೆ ಎಂದು ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.
ಆಹ್ವಾನಿಸಿಲ್ಲ: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರದ ಬಗ್ಗೆ ಆಯೋಜಕರ ತನ್ನನ್ನು ಆಹ್ವಾಸಿಲ್ಲ. ಹೀಗಾಗಿ ರವಿವಾರ ರಜೆ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಬಾಹುಬಲಿ ಸಿನಿಮಾ ನೋಡಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.
ಮಧ್ಯಾಹ್ನ 3:30 ಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಗೆ ತೆರಳುತ್ತೇನೆ. ಬಾಹುಬಲಿ ಚಿತ್ರ ವೀಕ್ಷಣೆ ಸಂಬಂಧ ಯಾರಿಗೂ ಅನ್ಯತಾ ಭಾವನೆ ಬೇಡ. ಕುಟುಂಬದ ಸದಸ್ಯರಿಗೆ ಕೊಂಚ ಸಮಯ ನೀಡಬೇಕಲ್ಲವೇ ಎಂದು ಈಶ್ವರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆ ಹಾಕಿದರು.