ಇದು ರಾಜಕೀಯ ಪ್ರೇರಿತ ದಾಳಿ: ಪರಮೇಶ್ವರ್
ಬೆಂಗಳೂರು, ಆ.2: ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಜಕೀಯ ಪ್ರೇರಿತವಾದ ದಾಳಿ ಇದಾಗಿದೆ. ಗುಜರಾತ್ ಕಾಂಗ್ರೆಸ್ ಶಾಸಕರ ರಕ್ಷಣೆ ಮಾಡುತ್ತಿರುವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆಸಿರೋದು ಸರಿಯಲ್ಲ ಎಂದಿದ್ದಾರೆ.
ಗುಜರಾತಿನ ಕಾಂಗ್ರೆಸ್ ಶಾಸಕರಿಗೆ ಹಣ ಮತ್ತು ಆಮಿಷಗಳನ್ನೊಡ್ಡಿ ಮನವೊಲಿಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ಐಟಿ ದಾಳಿ ನಡೆಸಲು ಯಾರಾದರೂ ಸೂಚನೆ ನೀಡಿದರೆ ಅದು ಖಂಡನೀಯ. ಬಿಜೆಪಿ ನಾಯಕರ ಕುದುರೆ ವ್ಯಾಪಾರದಿಂದ ಕಾಂಗ್ರೆಸ್ ಶಾಸಕರನ್ನು ರಕ್ಷಿಸಲು ಡಿ.ಕೆ. ಶಿವಕುಮಾರ್ ಸಹಕರಿಸಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ದಾಳಿ ನಡೆಸುವುದು ತಪ್ಪಲ್ಲ. ಆದರೆ ರಾಜಕೀಯ ಪ್ರೇರಿತವಾಗಿ ದಾಳಿ ನಡೆಸಿದ್ದು ಖಂಡನೀಯ ಎಂದು ಅವರು ಹೇಳಿದರು.
Next Story