ಚೀನಾ ತಂತ್ರಗಾರಿಕೆಯಿಂದ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ: ಪಾರ್ಥಸಾರಥಿ
ಬೆಂಗಳೂರು, ಆ.12: ಜಗತ್ತಿನ ಎಲ್ಲ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ತಂತ್ರಗಾರಿಕೆಯಿಂದ ತನ್ನ ಹಿತಾಸಕ್ತಿ ಸಾಧಿಸಲು ಹೊರಟಿದೆ ಎಂದು ಸ್ಯಾನ್ಫ್ರಾನ್ಸಿಸ್ಕೋನ ಭಾರತದ ಮಾಜಿ ಕಾನ್ಸುಲ್ ಜನರಲ್ ಎನ್.ಪಾರ್ಥಸಾರಥಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಿಥಿಕ್ ಸೊಸೈಟಿನಲ್ಲಿ ಫೋರಂ ಫಾರ್ ಇಂಟೆಗ್ರೇಟೆಡ್ ನ್ಯಾಶನಲ್ ಸೆಕ್ಯೂರಿಟಿ (ಎಫ್ಐಎನ್ಎಸ್) ವತಿಯಿಂದ ಆಯೋಜಿಸಿದ್ದ ‘ಡೊಕ್ಲಾಮ್ ಪ್ರದೇಶದ ಮೇಲೆ ಇಂಡೋ-ಚೀನಾ ನಿಲುವು-ತಂತ್ರಗಾರಿಕೆಯ ದೃಷ್ಟಿಕೊನಗಳು’ ಕುರಿತ ವಿಚಾರ ಕಮ್ಮಟದಲ್ಲಿ ‘ಆರ್ಥಿಕ ದೃಷ್ಟಿಕೋನದ ತಂತ್ರಗಾರಿಕೆ’ ಕುರಿತು ಮಾತನಾಡಿದ ಅವರು, ತಂತ್ರಗಾರಿಕೆ ಡೊಕ್ಲಾಮ್ ಬಿಕ್ಕಟ್ಟು ಕೂಡ ಚೀನಾ ಹಿತಾಸಕ್ತಿಯ ಒಂದು ಭಾಗ. ಒಂದು ವೇಳೆ ಭಾರತ-ಚೀನಾ ನಡುವೆ ಯುದ್ಧವಾದರೆ ಎರಡೂ ದೇಶಗಳ ಹೂಡಿಕೆ ಮತ್ತು ವ್ಯಾಪಾರಕ್ಕೆ ಭಾರಿ ಹೊಡೆತ ಬೀಳಲಿದೆ ಎಂದರು.
ವಿಶ್ವದಲ್ಲಿ ಭಾರತ ಮತ್ತು ಚೀನಾ ಅತಿಹೆಚ್ಚು ಆರ್ಥಿಕತೆ ಹೊಂದಿರುವ ರಾಷ್ಟ್ರಗಳಾಗಿದ್ದು, ಚೀನಾ ಜಿಡಿಪಿಯಲ್ಲಿ ಭಾರತಕ್ಕಿಂತ ಮುಂದಿದೆ. ಆದರೆ, ಏಷ್ಯಾ ರಾಷ್ಟ್ರಗಳ ಅರ್ಥ ವ್ಯವಸ್ಥೆಯಲ್ಲಿ ಚೀನಾಕ್ಕೆ ಭಾರತ ಪ್ರಬಲ ಪೈಪೋಟಿ ನೀಡುತ್ತಿದೆ. ತಂತ್ರಗಾರಿಕೆಗೆ ಹೆಸರಾದ ಚೀನಾ ಅಮೆರಿಕಾಗೆ ಸೆಡ್ಡು ಹೊಡೆದು ವಿಶ್ವದ ಪ್ರಬಲ ರಾಷ್ಟ್ರ ಎನಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿದೆ. ಈ ನಿಟ್ಟಿನಲ್ಲಿ ಮೊದಲಿಗೆ ತನ್ನ ನೆರೆಹೊರೆಯ ದೇಶಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ರಸ್ತೆಯ ನೆಪದಲ್ಲಿ (ಒನ್ ಬೆಲ್ಟ್ ಒನ್ ರೋಡ್) ಡೊಕ್ಲಾಮ್ ಪ್ರದೇಶವನ್ನು ವಶಕ್ಕೆ ಪಡೆದು ಕ್ರಮೇಣ ಭಾರತದ ಮೇಲೆ ಹಿಡಿತ ಸಾಧಿಸಲು ಹೊರಟಿದೆ. ಆದರೆ, ಭಾರತ ಅದಕ್ಕೆ ಅವಕಾಶ ನೀಡದೆ ದಿಟ್ಟ ಪ್ರತಿರೋಧ ವ್ಯಕ್ತಪಡಿಸಿದೆ. ಚೀನಾ ಮತ್ತು ಭಾರತ ಎರಡಕ್ಕೂ ನೆರೆಯ ರಾಷ್ಟ್ರವಾಗಿರುವ ಭೂತಾನ್, ಹಿಂದಿನಿಂದಲೂ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದೆ ಎಂದು ತಿಳಿಸಿದರು.
ಕೆಲವು ದಶಕಗಳ ಹಿಂದೆ ಭಾರತ ಮತ್ತು ಚೀನಾದ ಜಿಡಿಪಿ ಸಮಾನವಾಗಿತ್ತು. ಇತ್ತೀಚಿನ ಮೂರು ದಶಕಗಳಲ್ಲಿ ಚೀನಾ ಅರ್ಥ ವ್ಯವಸ್ಥೆಯಲ್ಲಿ ವೇಗದ ಬೆಳವಣಿಗೆ ಕಂಡಿತು. ಜಾಗತಿಕ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದ ಚೀನಾ, ಅದರ ಜತೆಗೆ ಮಿಲಿಟಿರಿ ಶಕ್ತಿಯನ್ನು ವೃದ್ಧಿಸಿಕೊಂಡಿದೆ. ಉತ್ಪಾದನಾ ಕ್ಷೇತ್ರದಲ್ಲಿ ಅದ್ಧುತ ಬೆಳವಣಿಗೆ ಕಂಡಿರುವ ಚೀನಾ, ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸಿದೆ. ಭಾರತವೂ ಕೂಡ ಚೀನಾ ಉತ್ಪನ್ನಗಳ ಮಾರಾಟಕ್ಕೆ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಅವರು ಹೇಳಿದರು.
ಇಂಡಿಯಾ ಟುಡೆ ಮ್ಯಾಗಜಿನ್ ಕಾರ್ಯಕಾರಿ ಸಂಪಾದಕ ಸಂದೀಪ್ ಉನ್ನಿತನ್ ಮಾತನಾಡಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠ ರಾಷ್ಟ್ರವಾಗುವ ಕನಸು ಕಾಣುತ್ತಿರುವ ಚೀನಾ ಡೊಕ್ಲಾಮ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾಧ್ಯಮಗಳ ಮುಖಾಂತರ ಭಾರತಕ್ಕೆ ಬೆದರಿಕೆ ಹಾಕುತ್ತಿದೆ. ಇದೊಂದು ತಂತ್ರಗಾರಿಕೆಯಾಗಿದ್ದು, ರಸ್ತೆಯ ನೆಪದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಿಕೊಂಡು ಸಾಮ್ರಾಜ್ಯ ವಿಸ್ತರಣೆ ಮಾಡುವುದು ಚೀನಾದ ಉದ್ದೇಶ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ವಿ.ಎಂ.ಪಾಟೀಲ್, ಎಫ್ಐಎನ್ಎಸ್ ಅಧ್ಯಕ್ಷ ವಿಜಯ್ ಗೊರೆ, ಸದಸ್ಯ ವಸಂತ ಹೆಗೆಡೆ ಮತ್ತಿತರರು ಉಪಸ್ಥಿತರಿದ್ದರು.
ಚೀನಾ ಭಾರತ ಸೇರಿದಂತೆ ಇತರೆ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವುದಕ್ಕೆ ತನ್ನ ಮಿಲಿಟರಿ ಶಕ್ತಿ ಕಾರಣ. ವಿಶ್ವದ 27 ರಾಷ್ಟ್ರಗಳು ಚೀನಾದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಹೀಗಾಗಿ ಭಾರತದಲ್ಲೂ ಕೂಡ ಮಿಲಿಟರಿಯನ್ನು ಮತ್ತಷ್ಟು ಪ್ರಬಲಗೊಳಿಸಬೇಕು. ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಾಗಬೇಕು.
-ವಿ.ಎಂ.ಪಾಟೀಲ್, ನಿವೃತ್ತ ಲೆಫ್ಟಿನೆಂಟ್ ಜನರಲ್