ಎಚ್.ವೈ. ಮೇಟಿ ರಾಸಲೀಲೆ ಪ್ರಕರಣ: ಯಡಿಯೂರಪ್ಪ ಸಂಬಂಧಿಯ ಕೈವಾಡ ?
ಬೆಂಗಳೂರು, ಆ.17: ಮಾಜಿ ಸಚಿವ ಎಚ್.ವೈ. ಮೇಟಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಸಂಬಂಧಿ ಸಂತೋಷ್ ನಿಕಟ ಸಂಪರ್ಕ ಹೊಂದಿದ್ದು, ಈ ಪ್ರಕರಣದಲ್ಲಿ ಆತನ ಕೈವಾಡವಿರುವುದಾಗಿ ಹೇಳಲಾಗುತ್ತಿದೆ.
ಗುರುವಾರ ನಗರದ ಅರಮನೆ ರಸ್ತೆಯಲ್ಲಿರುವ ಸಿಐಡಿ ಪ್ರಧಾನ ಕಚೇರಿಯಲ್ಲಿ ಬಿ.ಎಸ್.ಯಡಿಯೂರಪ್ಪ ಸಂಬಂಧಿ ಸಂತೋಷ್ನನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದರು. ಸಚಿವ ಎಚ್.ವೈ.ಮೇಟಿ ಪ್ರಕರಣದಲ್ಲಿ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಜೊತೆ ನಿಕಟ ಸಂಪರ್ಕ ಹೊಂದಿರುವುದಾಗಿ ಸಂತೋಷ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಎಚ್.ವೈ.ಮೇಟಿ ರಾಸಲೀಲೆ ನಡೆಸಿದ ದೃಶ್ಯಗಳನ್ನು ಸಂತೋಷ್ ತಮ್ಮ ಸಿಬ್ಬಂದಿಗಳಿಗೆ ಸೆರೆ ಹಿಡಿಯುವಂತೆ ಸೂಚಿಸಿ, ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿತ್ತು. ಅಲ್ಲದೆ, ಎಚ್.ವೈ.ಮೇಟಿ ಅವರು ಹಣ ನೀಡಲು ಒಪ್ಪದಿದ್ದಾಗ ಆರ್ಟಿಐ ಕಾರ್ಯಕರ್ತರೊಬ್ಬರ ಮೂಲಕ ಮಾಧ್ಯಮಗಳಿಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದರು ಎಂಬ ಆರೋಪದ ಮೇಲೆ ಯಡಿಯೂರಪ್ಪ ಸಂಬಂಧಿ ಸಂತೋಷ್ನನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.