ಲಿಂಗಾಯತ ಸ್ವತಂತ್ರ ಧರ್ಮ: ಆರೆಸ್ಸೆಸ್ಗೆ ಕಳವಳ ಬೇಡ; ಮಾತೆ ಮಹಾದೇವಿ
ಬಾಗಲಕೋಟೆ, ಆ. 20: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆದು ಹಿಂದೂ ಸಂಸ್ಕೃತಿ ವಿರೋಧಿಯಾಗದು. ಹೀಗಾಗಿ, ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರು ಕಳವಳ ಪಡಬೇಕಾಗಿಲ್ಲ ಎಂದು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.
ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯದೇ ಇದ್ದಲ್ಲಿ ಹಿಂದೂ ಧರ್ಮದಲ್ಲಿ ಕೇವಲ ಒಂದು ಜಾತಿಯಾಗಿ ಉಳಿಯುತ್ತದೆ. ಬೌದ್ಧ, ಶಿಖ್, ಜೈನ ಧರ್ಮಗಳಂತೆ ಇದು ಒಂದು ಸ್ವತಂತ್ರ ಧರ್ಮವಾಗಬೇಕು. ಸಂವಿಧಾನಿಕ ಮಾನ್ಯತೆ ಪಡೆದರೂ ಹಿಂದೂ ಸಂಸ್ಕೃತಿ ವಿರೋಧಿಯಲ್ಲ. ದೇಶದ ವಿರೋಧಿಯಲ್ಲ. ಹೀಗಾಗಿ, ಮೋಹನ್ ಭಾಗವತ್ ಅವರು ಈ ಸ್ವತಂತ್ರ ಧರ್ಮದ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದರು.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಿಂದೂವಾದಿಯಾಗಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಈ ಕುರಿತ ಏನು ಮಾತನಾಡದಂತೆ ಅವರಿಗೆ ಆದೇಶ ಮಾಡಿದೆ. ಹೀಗಾಗಿ, ಅವರು ಮೌನವಾಗಿದ್ದಾರೆ ಎಂದು ಹೇಳಿದರು.
ಬರುವ 22ರಂದು ಬೆಳಗಾವಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ರ್ಯಾಲಿ ಹಾಗೂ ಸೆ.3 ರಂದು ಮಹಾರಾಷ್ಟ್ರದಲ್ಲಿ ಹಾಗೂ ಅ.30 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.