ಕೇಂದ್ರದಿಂದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ: ಡಾ.ಕೆ.ರಹ್ಮಾನ್ಖಾನ್
ಬೆಂಗಳೂರು, ಆ.21: ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ದಳ, ಸಿಬಿಐ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರಕಾರ ತನ್ನ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಇವುಗಳ ಪಾವಿತ್ರತೆಯನ್ನು ಹಾಳು ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಕೆ.ರಹ್ಮಾನ್ಖಾನ್ ದೂರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಆಡಳಿತ ಪಕ್ಷದ ಸಂಸದರು ಸರಕಾರದ ಲೋಪಗಳ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷಗಳು ಸರಕಾರದ ವಿರುದ್ಧ ಧ್ವನಿ ಎತ್ತಿದರೆ ಅದನ್ನು ಮಹಾಪಾಪ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕಿಡಿಗಾರಿದರು.
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರಕಾರ ಕಳೆದ ಮೂರು ವರ್ಷಗಳಲ್ಲಿ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ತನ್ನ ಆಡಳಿತದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದೇಶದ ಪರಿಸ್ಥಿತಿಯನ್ನೆ ಹಾಳು ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರು, ದಲಿತರು ಅಷ್ಟೇ ಅಲ್ಲ ಎಲ್ಲ ವರ್ಗದ ಜನರು ಆತಂಕದಿಂದ ಜೀವನ ನಡೆಸುವಂತಾಗಿದೆ. ಮುಸ್ಲಿಮರ ದೇಶಪ್ರೇಮದ ಬಗ್ಗೆ ಸವಾಲುಗಳನ್ನು ಎತ್ತ ಲಾಗುತ್ತಿದೆ. ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆಯೇ ಇಲ್ಲವೇ ಎಂಬುದರ ಕುರಿತು ಸಾಕ್ಷ್ಯಗಳನ್ನು ನೀಡುವಂತೆ ಹೊರಡಿಸಿರುವ ಸುತ್ತೋಲೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ನಿಕಟಪೂರ್ವ ಉಪರಾಷ್ಟ್ರಪತಿ ಡಾ.ಹಾಮೀದ್ಅನ್ಸಾರಿ, ವಿದಾಯ ಭಾಷಣದಲ್ಲಿ ದೇಶದಲ್ಲಿನ ಮುಸ್ಲಿಮರಿಗೆ ಅಭದ್ರತೆ ಕಾಡುತ್ತಿದೆ ಎಂದು ನೀಡಿದ ಹೇಳಿಕೆಗೆ ಪ್ರಧಾನಿ ಹಾಗೂ ಹಾಲಿ ಉಪರಾಷ್ಟ್ರಪತಿ ಟೀಕೆಗಳನ್ನು ಮಾಡುತ್ತಾರೆ. ಉಪರಾಷ್ಟ್ರಪತಿ ಇಂತಹ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತಿಲ್ಲ ಎಂದು ಹೇಳಿದರು.
ಬಿಜೆಪಿ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡಲು ಕಾಂಗ್ರೆಸ್ ಪ್ರಸ್ತುತ ಪರಿಸ್ಥಿತಿಯಲ್ಲಿ ವಿಫಲವಾಗಿದೆ. ಜಾತ್ಯತೀತ ತತ್ವದ ಪ್ರತಿಪಾದಕ, ಬಿಜೆಪಿಯ ಕೋಮುವಾದಿ ಕಾರ್ಯಸೂಚಿಯ ವಿರೋಧಿಯಾಗಿದ್ದ ನಿತೀಶ್ ಕುಮಾರ್ ಸಹ ಈ ಸರಕಾರದ ಕಪಿಮುಷ್ಠಿಗೆ ಸಿಲುಕಿಕೊಂಡಿದ್ದಾರೆ. ದೇಶದಲ್ಲಿನ ಈ ಪರಿಸ್ಥಿತಿಯಿಂದ ನಾವು ಪಲಾಯನ ಮಾಡದೆ, ದೃಢವಾಗಿ ಎದುರಿಸಬೇಕು. ಬಿಜೆಪಿಯ ವಿರುದ್ಧ ರಾಷ್ಟ್ರೀಯಮಟ್ಟದ ಕಾಂಗ್ರೆಸ್ ಪಕ್ಷವನ್ನು ಪ್ರಬಲ ಗೊಳಿಸಬೇಕು. ಪ್ರಾದೇಶಿಕ ಪಕ್ಷಗಳು ಜಾತ್ಯತೀತ ತತ್ವದ ಪ್ರತಿಪಾದನೆ ಮಾಡಿದರೂ, ತಮ್ಮ ಲಾಭಕ್ಕಾಗಿ ಯಾರ ಜೊತೆಯಾದರೂ ಕೈ ಜೋಡಿಸಲು ಮುಂದಾಗುತ್ತಾರೆ. ಅಂತಹವರನ್ನು ನಂಬುವಂತಿಲ್ಲ ಎಂದು ಹೇಳಿದರು.
ಜಾತಿ, ಧರ್ಮದ ಆಧಾರದಲ್ಲಿ ಮತಗಳ ಕ್ರೋಡೀಕರಣ ಮಾಡುತ್ತಿರುವ ಬಿಜೆಪಿಯ ರಾಜಕೀಯ ದಾಳ ಹಾಗೂ ಭಾವನಾತ್ಮಕವಾದ ಪಕ್ಷಗಳ ಬಗ್ಗೆ ಮುಸ್ಲಿಮರು ಎಚ್ಚರಿಕೆಯಿಂದಿರಬೇಕು. ದೇಶದಲ್ಲಿನ ಈ ಗಂಭೀರ ಪರಿಸ್ಥಿತಿಯ ವಿರುದ್ಧ ಹೋರಾಡಲು ಎಲ್ಲ ಮುಸ್ಲಿಮ್ ಜನಪ್ರತಿನಿಧಿಗಳು, ಬುದ್ಧಿ ಜೀವಿಗಳು, ಹೋರಾಟಗಾರರು ತಮ್ಮ ವೈಮನಸ್ಯಗಳನ್ನು ಬದಿಗಿಟ್ಟು ಹೋರಾಡಬೇಕಿದೆ ಎಂದು ರಹ್ಮಾನ್ಖಾನ್ ಕರೆ ನೀಡಿದರು.
ವಕ್ಫ್ಬೋರ್ಡ್ ವಿರುದ್ಧ ಅಸಮಾಧಾನರಾಜ್ಯ ವಕ್ಫ್ಬೋರ್ಡ್ನ ಆಡಳಿತ ಸಮಿತಿಯ ಅಧಿಕಾರವಧಿ ಪೂರ್ಣಗೊಳ್ಳುವ ಮುಂಚೆಯೆ, ಅಧ್ಯಕ್ಷರು, ಸದಸ್ಯರ ಚುನಾವಣೆಗೆ ಅಗತ್ಯವಿರುವ ಪ್ರಕ್ರಿಯೆಗಳನ್ನು ಆರಂಭಿಸಬೇಕು. ಒಂದು ವೇಳೆ ಆಡಳಿತ ಸಮಿತಿಯಲ್ಲಿ ಏನಾದರೂ ಅವ್ಯವಹಾರಗಳು ನಡೆದಿದ್ದರೆ, ಅದನ್ನು ಸೂಪರ್ಸೀಡ್ ಮಾಡಿ ಸರಕಾರ ಆಡಳಿತಾಧಿಕಾರಿ ನೇಮಕ ಮಾಡಬಹುದು. ಆನಂತರ, ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು. ಆದರೆ, ವಕ್ಫ್ಬೋರ್ಡ್ನ ಚುನಾಯಿತ ಸಮಿತಿಯ ಅಧಿಕಾರವಧಿ ಪೂರ್ಣಗೊಂಡು ಒಂದು ವರ್ಷವಾಗಿದೆ. ಈವರೆಗೆ ಚುನಾವಣೆ ನಡೆಸದೆ, ಆಡಳಿತಾಧಿಕಾರಿಯನ್ನು ಆ ಸ್ಥಾನದಲ್ಲಿ ಕೂರಿಸಲಾಗಿದೆ. ಇದು ಕಾನೂನಿಗೆ ಸಂಪೂರ್ಣ ವಿರುದ್ಧವಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಯ ಗಮನಕ್ಕೂ ತಂದಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
-ಡಾ.ಕೆ.ರಹ್ಮಾನ್ಖಾನ್, ರಾಜ್ಯಸಭಾ ಸದಸ್ಯ