ಬಿಬಿಎಂಪಿ ಅಧಿಕಾರಿ ಎಸಿಬಿ ಬಲೆಗೆ
ಬೆಂಗಳೂರು, ಆ.21: ಬಿಎಂಪಿಯ ಕಂದಾಯ ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿ ನಾಗೇಂದ್ರ ಎಂಬುವರ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿದೆ.
ಬೇಗೂರಿನ ನಿವಾಸಿಯೊಬ್ಬರು ತಮ್ಮ ಪರಿಚಯದಾರರೊಬ್ಬರ ರೆವಿನ್ಯೂ ನಿವೇಶನಗಳಿಗೆ ಸಂಬಂಧಿಸಿದಂತೆ ಬಿ ರಿಜಿಸ್ಟರ್ ಎಕ್ಸ್ಟ್ರಾಕ್ಟ್ ಕೋರಿ ಅಲ್ಲಿನ ಬಿಬಿಎಂಪಿಯ ಕಂದಾಯ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಬಿ ರಿಜಿಸ್ಟರ್ ಎಕ್ಸ್ಟ್ರಾಕ್ಟ್ ನೀಡಲು ಅಧಿಕಾರಿ ನಾಗೇಂದ್ರ 25 ಸಾವಿರ ಹಣವನ್ನು ಲಂಚ ರೂಪದಲ್ಲಿ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಅರ್ಜಿದಾರ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಅದರಂತೆ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯಾಚರಣೆಯಲ್ಲಿ ಅಧಿಕಾರಿ 20 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಸಾಕ್ಷಿ ಸಮೇತರಾಗಿ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಆರೋಪಿ ನಾಗೇಂದ್ರನ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಎಸಿಬಿ ಹೇಳಿದೆ.