ಕುತ್ತಿಗೆ ಬಿಗಿದು ಪತ್ನಿ ಕೊಲೆ: ಆರೋಪ
ಬೆಂಗಳೂರು, ಆ.22: ಪತಿಯೇ ಪತ್ನಿಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದಿರುವ ಆರೋಪ ಇಲ್ಲಿನ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಶ್ರೀರಾಂಪುರದ ಸನ್ರೈಸ್ ವೃತ್ತದಲ್ಲಿ ವಾಸಿಸುತ್ತಿದ್ದ ಜಾನಕಿ ಜ್ಯೋತಿ(45) ಎಂಬಾಕೆ ಕೊಲೆಯಾದವರು. ಕೃತ್ಯವೆಸಗಿ ಪರಾರಿಯಾಗಿರುವ ಪತಿ ಚಂದ್ರಶೇಖರ್ ಎಂದು ಪೊಲೀಸರು ಗುರುತಿಸಿದ್ದಾರೆ.
ಹೂವಿನ ಅಲಂಕಾರ ಮಾಡುತ್ತಿದ್ದ ಚಂದ್ರಶೇಖರ್, 15 ವರ್ಷಗಳ ಹಿಂದೆ ಜಾನಕಿ ಜ್ಯೋತಿಯನ್ನು ವಿವಾಹವಾಗಿದ್ದ, ದಂಪತಿಗೆ 2 ಹೆಣ್ಣು, 4 ಗಂಡು ಮಕ್ಕಳಿದ್ದಾರೆ. ಇಬ್ಬರ ನಡುವೆ ಜಗಳ ನಡೆದು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಸೋಮವಾರ ರಾತ್ರಿ ದಂಪತಿಯ ನಡುವೆ ಮತ್ತೆ ಜಗಳ ಉಂಟಾಗಿ ಆಕ್ರೋಶಗೊಂಡ ಚಂದ್ರಶೇಖರ್ ಮಕ್ಕಳೆಲ್ಲಾ ಮಲಗಿದ್ದಾಗ ಜಾನಕಿ ಜ್ಯೋತಿಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಧಾವಿಸಿರುವ ಶ್ರೀರಾಂಪುರ ಪೊಲೀಸರು ಪ್ರಕರಣ ದಾಖಲಿಸಿ ಪರಾರಿಯಾಗಿರುವ ಚಂದ್ರಶೇಖರ್ಗಾಗಿ ತೀವ್ರ ಶೋಧ ನಡೆಸಿದ್ದಾರೆ. ಆರೋಪಿ ಚಂದ್ರಶೇಖರ್ ಮತ್ತೊಂದು ಮಹಿಳೆ ಜೊತೆ ಅನೈತಿಕ ಸಂಬಂಧವಿದ್ದು ಅದೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.