21 ರೂ.ವಂಚಿಸಿದ್ದಕ್ಕೆ 12 ಸಾವಿರ ರೂ. ಪರಿಹಾರ ತೆತ್ತ ವ್ಯಾಪಾರಿ
ಬೆಂಗಳೂರು, ಸೆ.25: ನಗರದ ಮಾಲ್ ಒಂದರಿಂದ ಮಿನರಲ್ ವಾಟರ್ ಬಾಟಲಿ ಖರೀದಿಸಿದ್ದ ಗ್ರಾಹಕರೊಬ್ಬರಿಗೆ 21 ರೂ.ವಂಚಿಸಿದ್ದಕ್ಕಾಗಿ ವ್ಯಾಪಾರಿಯೊಬ್ಬರಿಗೆ 12 ಸಾವಿರ ರೂ.ದಂಡ ವಿಧಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಈ ತೀರ್ಪು ನೀಡಿದೆ.
ಪ್ರಕರಣವೇನು: ಕಾಟನ್ ಪೇಟೆಯ ರಾಘವೇಂದ್ರ ಕೆ.ಪಿ. ಎಂಬ ಗ್ರಾಹಕರು 2015ರ ಡಿಸೆಂಬರ್ 5ರಂದು ಬನ್ನೇರುಘಟ್ಟ ರಸ್ತೆಯ ರಾಯಲ್ ಮೀನಾಕ್ಷಿ ಮಾಲ್ನ ಜಿ.ಎಸ್ ಎಂಟರ್ಪ್ರೈಸಸ್ನಿಂದ ಕೋಕಾ ಕೋಲಾ ಉತ್ಪಾದಿತ ಕಿನ್ಲೇ ಮಿನರಲ್ ವಾಟರ್ ಬಾಟಲಿಯೊಂದನ್ನು ಖರೀದಿಸಿದ್ದರು. 1 ಲೀಟರ್ ಬಾಟಲಿಯ ಎಂಆರ್ಪಿ ಬೆಲೆ 19 ರೂ.ಆಗಿದ್ದರೂ ಅಂಗಡಿಯಾತ 40 ರೂ. ಪಡೆದಿದ್ದ ಎಂದು ಆರೋಪಿಸಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ತಾವು ಅದೇ ತರಹದ ಮತ್ತೊಂದು ನೀರಿನ ಬಾಟಲಿಯನ್ನು ಅದೇ ದಿನ ಸಂಜೆ ಜಯನಗರದ ಅಂಗಡಿಯಿಂದ 19 ರೂ.ಗೆ ಖರೀದಿಸಿದ್ದಾಗಿ ತಿಳಿಸಿದ್ದರು. ಎರಡೂ ಖರೀದಿಗಳ ಬಿಲ್ ಸಹಿತ ದಾಖಲೆಗಳನ್ನು ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸಿದ ಅವರು, ಕೋಕಾ ಕೋಲಾ ಕಂಪೆನಿ ಕೂಡ ಮಾಲ್ ವ್ಯಾಪಾರಿಗಳ ಜತೆ ಕೈಜೋಡಿಸಿ ಗ್ರಾಹಕರನ್ನು ವಂಚಿಸುತ್ತಿದೆ ಎಂದು ದೂರು ನೀಡಿದ್ದರು. 2016ರ ಆರಂಭದಲ್ಲಿ ನ್ಯಾಯಾಲಯ ಪ್ರಕರಣದ ವಿಚಾರಣೆ ಆರಂಭಿಸಿತ್ತು. ಇದೊಂದು ಸುಳ್ಳು ದೂರು ಎಂದು ಅಂಗಡಿ ಮಾಲಕ ವಾದಿಸಿದ್ದರು.