ಎದೆಗೆ ಚಾಕುವಿನಿಂದ ಇರಿದು ರೌಡಿ ಆತ್ಮಹತ್ಯೆ
ಬೆಂಗಳೂರು, ಸೆ.25: ಕುಡಿತದ ಚಟ ಅಂಟಿಸಿಕೊಂಡಿದ್ದ ರೌಡಿ ಅರವಿಂದ್ ಕ್ಲಿಂಟನ್ ಎದೆಗೆ ಚಾಕುವಿನಿಂದ ಇರಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಾಮಪುರ ಕ್ರೈಸ್ತರ ಕಾಲೋನಿಯಲ್ಲಿ ನಡೆದಿದೆ.
ಪೇಂಟಿಂಗ್ ಕೆಲಸ ಮಾಡುತ್ತಿದ್ದ ಕ್ಲಿಂಟನ್(30) ಕುಡಿತದ ಚಟ ಅಂಟಿಸಿಕೊಂಡಿದ್ದು, ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗದೆ ಪ್ರತಿದಿನ ಪತ್ನಿಯ ಜೊತೆ ಜಗಳ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ಕ್ಲಿಂಟನ್ನ ಕಿರುಕುಳದಿಂದ ಆತನ ಪತ್ನಿ ಮಾಯಾ ಬೇಸತ್ತಿದ್ದಳು.
ಕ್ಲಿಂಟನ್ ಸೋಮವಾರ ಬೆಳಗ್ಗೆ 10ರ ವೇಳೆ ಕೆಲಸಕ್ಕೆ ಹೋಗದೆ ಮನೆಗೆ ಬಂದು ಪತ್ನಿಯ ಜತೆ ಜಗಳ ಮಾಡಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಅಣ್ಣನಿಗೆ ಕರೆ ಮಾಡಿದ ಆತ ಜೀವನ ಸಾಕಾಗಿದೆ, ನಾನು ಬದುಕಿರುವುದಿಲ್ಲ ಎಂದು ಹೇಳಿದ್ದಾನೆ. ಕ್ಲಿಂಟನ್ದ್ದು ಯಾವಾಗಲೂ ಇದೇ ರೀತಿಯ ವರ್ತನೆ ಎಂದು ತಿಳಿದು ಸಹೋದರ ಸುಮ್ಮನಾಗಿದ್ದು, ಇದಾದ ಸ್ವಲ್ಪ ಹೊತ್ತಿನಲ್ಲೇ ಕ್ಲಿಂಟನ್ ಎದೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತನನ್ನು ಕೂಡಲೇ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಗಲಭೆ, ಜಗಳ, ದೊಂಬಿ ಸೇರಿದಂತೆ 4ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕ್ಲಿಂಟನ್ ಶ್ರೀರಾಮಪುರ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ.
ಈ ಮೊಕದ್ದಮೆ ದಾಖಲಿಸಿಕೊಂಡಿರುವ ಶ್ರೀರಾಮಪುರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.