ವೈರಲ್ ಕಣ್ ಮಿಟುಕಿನ ಹಾಡು ವಾಪಸ್ ಪಡೆಯದೇ ಇರಲು ನಿರ್ಧರಿಸಿದ ಚಿತ್ರ ತಂಡ
ತಿರುವನಂತಪುರಂ,ಫೆ.15 : ಚೆಂದುಳ್ಳಿ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಳ ವೈರಲ್ ಕಣ್ ಮಿಟುಕಿನ ದೃಶ್ಯವಿರುವ ‘ಒರು ಅಡಾರ್ ಲವ್’ ಚಿತ್ರದ 'ಮಾಣಿಕ್ಯ ಮಲರಾಯ ಪೂವಿ' ಹಾಡನ್ನು ವಾಪಸ್ ಪಡೆಯದೇ ಇರಲು ಚಿತ್ರದ ನಿರ್ದೇಶಕ ಓಮರ್ ಲುಲು ನಿರ್ಧರಿಸಿದ್ದಾರೆ.
ಈ ಹಾಡಿನ ಸಾಹಿತ್ಯ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸುತ್ತಿದೆ ಹಾಗೂ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುತ್ತಿದೆ ಎಂದು ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ಈ ಹಾಡನ್ನು ವಾಪಸ್ ಪಡೆಯಬಹುದೆಂಬ ಗುಮಾನಿ ಇದ್ದರೂ ಹಾಗಾಗಿಲ್ಲ.
ಮುಹಮ್ಮದ್ ಅಬ್ದುಲ್ ಮುಖೀತ್ ಖಾನ್ ಮತ್ತು ಕೆಲ ಯುವಕರು ಈ ಹಾಡಿನ ವಿರುದ್ಧ ದೂರು ದಾಖಲಿಸಿದವರು.
ಈ ಹಾಡಿನ ಸಾಹಿತ್ಯ ರಚಿಸಿದ ಖ್ಯಾತನಾಮರಾದ ಶಾನ್ ರೆಹಮಾನ್ ಅವರು ಕೂಡ ಈ ಹಾಡನ್ನು ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭ ಚಿತ್ರ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಔಸ್ಸೆಪಚ್ಚನ್ ಹಾಜರಿದ್ದರು.
ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರದ ಹೀರೋ ರೋಶನ್ ಅಬ್ದುಲ್ ರಹೂಫ್ ನನ್ನು ನೋಡಿ ಕಣ್ ಮಿಟುಕಿಸುವ ದೃಶ್ಯ ವೈರಲ್ ಆಗಿದ್ದರೂ ದೂರು ದಾಖಲಾದ ಹಿನ್ನೆಲೆಯಲ್ಲಿ ಆರಂಭದಲ್ಲಿ ಅದನ್ನು ಯುಟ್ಯೂಬಿನಿಂದ ಹಾಗೂ ಇತರ ಡಿಜಿಟಲ್ ಮಾಧ್ಯಮಗಳಿಂದ ವಾಪಸ್ ಪಡೆಯುವ ಬಗ್ಗೆ ಯೋಚಿಸಲಾಗಿತ್ತೆನ್ನಲಾಗಿದೆ.
ಚಿತ್ರದ ಬಿಡುಗಡೆಯನ್ನು ಒಂದು ತಿಂಗಳು ಮುಂದೂಡಲಾಗಿದ್ದು ಚಿತ್ರದ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ತಂದು ಪ್ರಿಯಾಳನ್ನು ಮುಖ್ಯ ಭೂಮಿಕೆಯಲ್ಲಿ ತರಲು ನಿರ್ಧರಿಸಲಾಗಿದೆಯೆನ್ನಲಾಗುತ್ತಿದೆ.