ಅಟ್ಟಯ್ಯ V/S ಹಂದಿ ಕಾಯೋಳು ರೆಡಿ
ಹೊಸನಟ ಲೋಕೇಂದ್ರ ಸೂರ್ಯ
ಸಿನೆಮಾ ಕನಸು ಕಾಣುವವರಲ್ಲಿ ಛಲ ಇರಬೇಕು ಎನ್ನುವ ಮಾತಿಗೆ ಹೊಸ ನಾಯಕ ನಟ ಲೋಕೇಂದ್ರ ಇನ್ನೊಂದು ಉದಾಹರಣೆಯಾಗುತ್ತಿದ್ದಾರೆ.
ಲೋಕೇಂದ್ರ ಸೂರ್ಯ ಸ್ವತಃ ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಅಟ್ಟಯ್ಯ V/S ಹಂದಿ ಕಾಯೋಳು’ ಸಿನೆಮಾ ಶೂಟಿಂಗ್ ಮುಗಿಸಿ ಸೆನ್ಸಾರ್ ಆಗುವ ಹಂತಕ್ಕೆ ಬಂದಿದೆ.
ಕೊಲೆಯೊಂದರ ಸುತ್ತ ಹೆಣೆದಿರುವ ಸಸ್ಪೆನ್ಸ್ ಹಾಗೂ ಮಾನವೀಯ ಸಂಬಂಧಗಳ ಕತೆ ಇದಾಗಿದ್ದು ನೈಜ ಘಟನೆ ಆಧರಿಸಿ ನಿರ್ಮಿಸಿರುವ ಸಿನೆಮಾ ಇದೆಂದು ಹೇಳಲಾಗಿದೆ.
ಆರ್ಕೆಷ್ಟ್ರಾ ತಂಡ ಹೊಂದಿರುವ ಲೋಕೇಂದ್ರ ಸೂರ್ಯ ಜನಪ್ರಿಯ ಗಾಯಕ ಹಾಗೂ ಗೀತರಚನೆಗಾರ ಕೂಡ. ತಮ್ಮದೇ ಸೂರ್ಯ-ಚಂದ್ರ ಮೆಲೋಡಿಸ್ ತಂಡದಿಂದ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. ಲೋಕೇಂದ್ರರನ್ನು ಹಲವರು ಜ್ಯೂನಿಯರ್ ಉಪೇಂದ್ರ ಅಂತಲೂ ಗುರುತಿಸುತ್ತಾರೆ.
ಬಹುತೇಕ ಹೊಸಬರನ್ನೇ ಸೇರಿಸಿಕೊಂಡು ತಮ್ಮ ಸಿನೆಮಾ ಸೃಷ್ಟಿಸಿರುವ ಲೋಕೇಂದ್ರ ಸೂರ್ಯ ತಮ್ಮ ಚಿತ್ರಕ್ಕಾಗಿ ಒಂದೆರಡು ಹಾಡನ್ನೂ ಬರೆದಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್ ಹಾಡಿರುವ ‘‘ಸಂಭವಾಮಿ ಯುಗೇ ಯುಗೇ, ಒಳ್ಳೇವ್ರಿಗೆಲ್ಲಾ ಹೊಗೆ ಹೊಗೆ’’ ಹಿಟ್ ಆಗುವ ನಿರೀಕ್ಷೆ ಮೂಡಿಸಿದೆ.
ಹೊಸ ರೀತಿಯ ಕತೆಗಳು ಕನ್ನಡ ಸಿನೆಮಾದಲ್ಲಿ ಈಗ ಟ್ರೆಂಡ್ ಆಗಿದೆ. ಅಟ್ಟಯ್ಯV/S ಹಂದಿ ಕಾಯೋಳು ಎಂಬ ಪಕ್ಕಾ ಕಮರ್ಶಿಯಲ್ ಸಸ್ಪೆನ್ಸ್ ಚಿತ್ರ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಬಹುದೆಂಬ ಭರವಸೆ ನಿರ್ಮಾಪಕರಾದ ಕೀರ್ತನ ಮೂವೀಸ್ನ ಲೋಕೇಶ್ ಗೌಡರದು.