ಕೇಸರಿ ಶೂಟಿಂಗ್ನಲ್ಲಿ ಅಗ್ನಿ ಅವಘಡ
ಕಳೆದ ವಾರ ಬಾಲಿವುಡ್ನ ಆ್ಯಕ್ಷನ್ ಹೀರೋ ಆಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದಾ ಭಾರೀ ದೊಡ್ಡ ಅಗ್ನಿ ಆಕಸ್ಮಿಕವೇ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ತಾರೆಯರಿಗಾಗಲಿ ಅಥವಾ ತಂತ್ರಜ್ಞರಿಗಾಗಲಿ ಹಾನಿಯಾಗಿಲ್ಲ. ಮುಂಬೈನಿಂದ 200 ಕಿ.ಮೀ. ದೂರದಲ್ಲಿರುವ ವಾಯಿ ಎಂಬಲ್ಲಿ , ಚಿತ್ರಕ್ಕಾಗಿ ಯುದ್ಧದ ಸನ್ನಿವೇಶವೊಂದರ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದೆ. ಚಿತ್ರದ ನಾಯಕ ಅಕ್ಷಯ್ಕುಮಾರ್ ಶೂಟಿಂಗ್ನಲ್ಲಿ ತನ್ನ ಭಾಗದ ದೃಶ್ಯಗಳಲ್ಲಿ ಅಭಿನಯಿಸಿ, ನಿರ್ಗಮಿಸಿದ ನಂತರವೇ ಈ ಅಗ್ನಿ ಅವಘಡವುಂಟಾಗಿದೆ.ಆದಾಗ್ಯೂ, ಚಿತ್ರಕ್ಕಾಗಿ ನಿರ್ಮಿಸಲಾಗಿದ್ದ ಇಡೀ ಸೆಟ್ ಅಗ್ನಿ ಗಾಹುತಿಯಾಗಿರುವುದರಿಂದ ಮತ್ತೊಮ್ಮೆ ಅದೇ ಸ್ಥಳದಲ್ಲಿ ಸೆಟ್ನ್ನು ಮರು ನಿರ್ಮಿಸಬೇಕಾಗಿದೆ.
ಚಿತ್ರದ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣ ಪೂರ್ಣಗೊಳ್ಳಲು ಹತ್ತು ದಿನಗಳಿರುವಾಗ ಈ ಅನಾಹುತ ಸಂಭವಿಸಿದೆ.ಅಂದಹಾಗೆ ಕೇಸರಿ ಚಿತ್ರದ ಸೆಟ್ನಲ್ಲಿ ನಡೆದಿರುವ ಎರಡನೆ ಅವಘಡ ಇದಾಗಿದೆ ಈ ಘಟನೆ ನಡೆಯುವುದಕ್ಕೇ ಕೇವಲ ಒಂದು ವಾರದ ಹಿಂದೆ ಅಕ್ಷಯ್ ಕುಮಾರ್ ಶೂಟಿಂಗ್ ವೇಳೆ ಬೆನ್ನುಮೂಳೆಗೆ ಪೆಟ್ಟಾಗಿತ್ತು.
ಅಕ್ಷಯ್ ಕುಮಾರ್ ಹಾಗೂ ಪರಿಣತಿ ಚೋಪ್ರಾ ಅಭಿನಯದ ಕೇಸರಿ, 1897ರಲ್ಲಿ ನಡೆದ ಪ್ರಸಿದ್ಧ ಸಾರಾಗಡಿ ಯುದ್ಧದ ಕಥಾವಸ್ತವನ್ನು ಒಳಗೊಂಡಿದೆ. ಕೇಸರಿಯಲ್ಲಿ ಅಕ್ಷಯ್ಕುಮಾರ್ ಅವರು ಸಾರಾಗಡಿ ಸಂಗ್ರಾಮದಲ್ಲಿ 10 ಸಾವಿರಕ್ಕೂ ಅಧಿಕ ಪಶ್ತೂನ್ ಓರ್ಝಾಕಾಯ್ ಬುಡಕಟ್ಟು ಮಂದಿಯ ವಿರುದ್ಧ ವೀರಾವೇಶದಿಂದ ಕಾದಾಡಿದ ಭಾರತೀಯ ಬ್ರಿಟಿಶ್ ಸೇನೆಯ 21 ಸೈನಿಕರ ತಂಡದ ನೇತೃತ್ವ ವಹಿಸಿದ್ದ ಹವಾಲ್ದಾರ್ ಈಶ್ವರ್ಸಿಂಗ್ನ ಪಾತ್ರದಲ್ಲಿ ನಟಿಸಿದ್ದಾರೆ. ಕರಣ್ ಜೋಹರ್ ತನ್ನ ಧರ್ಮಾ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಕ್ಷಯ್ ಕುಮಾರ್ ಸಹ ನಿರ್ಮಾಪಕರಾಗಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದ ಕೇಸರಿ, ಮುಂದಿನ ವರ್ಷದ ಹೋಳಿ ಹಬ್ಬದ ವೇಳೆಗೆ ಬಿಡುಗಡೆಗೊಳ್ಳಲಿದೆ. ಉದಯೋನ್ಮುಖ ಕಲಾವಿದರಾದ ಸಿದ್ಧಾಂತ್ ಶರ್ಮಾ, ಅಶ್ವತ್ ಭಟ್, ಪವನ್ ಮಲ್ಹೋತ್ರಾ ಹಾಗೂ ರಾಣಾ ರಣಬೀರ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.