ನಟ ದುನಿಯಾ ವಿಜಯ್ ಅರ್ಜಿ ವಿಚಾರಣೆ ತೀರ್ಪು ನಾಳೆ
ಬೆಂಗಳೂರು, ಸೆ.29: ಜಿಮ್ ತರಬೇತುದಾರ ಮಾರುತಿ ಗೌಡ ಅಪಹರಣ ಹಾಗೂ ಹಲ್ಲೆ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದುನಿಯಾ ವಿಜಯ್ ಹಾಗೂ ಸಹಚರರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ತೀರ್ಪನ್ನು ಅ.1 ಕ್ಕೆ ಕಾಯ್ದಿರಿಸಿದೆ.
ಶನಿವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾ.ಟಿ.ಪಿ ರಾಮಲಿಂಗೇಗೌಡ, ನಾಲ್ವರು ಆರೋಪಿಗಳ ಜಾಮೀನು ಸಂಬಂಧ ವಾದ ಪ್ರತಿವಾದ ಆಲಿಸಿ, ತೀರ್ಪುನ್ನು ಅ.1ಕ್ಕೆ ಕಾಯ್ದಿರಿಸಿದ್ದಾರೆ.
ಈ ಹಿಂದೆ ಹಲ್ಲೆಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಾರುತಿ ಗೌಡ ಆರೋಗ್ಯ ಕುರಿತು ವೈದ್ಯರ ರಿಪೋರ್ಟ್ ಹಾಗೂ ವಿಜಯ್ ಹಾಗೂ ತಂಡದವರ ರಕ್ತ ಪರೀಕ್ಷಾ ವರದಿ ಸಲ್ಲಿಸದೇ ಇದ್ದ ಕಾರಣ 8ನೇ ಎಸಿಎಂಎಂ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು.
ಪ್ರತಿಭಟನೆ: ನಟ ದುನಿಯಾ ವಿಜಯ್ ಅವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಅಖಿಲ ಕರ್ನಾಟಕ ದುನಿಯಾ ವಿಜಯ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮ ವೇಳೆ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ಸಹಚರರ ಮೇಲೆ ಗಲಾಟೆಯಾಗಿದೆ. ಈ ವೇಳೆ ಮಾರುತಿಗೌಡರನ್ನು ರಕ್ಷಿಸಲು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆದರೆ ಪರಿಸ್ಥಿತಿಯನ್ನು ಪಾನಿಪುರಿ ಕಿಟ್ಟಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.