ದೀಪಿಕಾ ಈಗ ನಿರ್ಮಾಪಕಿ
ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದರೂ, ಆನಂತರ ದೀಪಿಕಾ ಪಡುಕೋಣೆ ಚಿತ್ರರಂಗದಿಂದ ತುಸು ಬ್ರೇಕ್ ತೆಗೆದುಕೊಂಡಿದ್ದರು. ಆಕೆಯ ಮುಂದಿನ ಪ್ರಾಜೆಕ್ಟ್ ಯಾವುದೆಂಬ ಬಗ್ಗೆ ಬಾಲಿವುಡ್ನಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು.
ಆದರೆ ಇದೀಗ ದೀಪಿಕಾ, ಸೂಪರ್ಹಿಟ್ ಚಿತ್ರ ರಾಝಿಯ ನಿರ್ದೇಶಕಿ ಮೇಘನಾ ಗುಲ್ಜಾರ್ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ದೈನಿಕವೊಂದು ವರದಿ ಮಾಡಿದೆ. ಚಿತ್ರದ ಬಗ್ಗೆ ಮೇಘನಾ ಜೊತೆ ದೀಪಿಕಾ ಸಮಗ್ರವಾಗಿ ಚರ್ಚಿಸಿದ ಬಳಿಕವೇ ಆಕೆ ನಟಿಸಲು ಒಪ್ಪಿಕೊಂಡಿದ್ದಾರಂತೆ.
ಆ್ಯಸಿಡ್ ದಾಳಿಗೊಳಗಾಗಿ ಬದುಕುಳಿದ ಲಕ್ಷ್ಮೀ ಅಗರ್ವಾಲ್ ಅವರ ಬದುಕನ್ನು ಅಧರಿಸಿದ ಕಥಾವಸ್ತುವನ್ನು ಈ ಚಿತ್ರ ಹೊಂದಿದೆಯೆಂಬ ಮಾತುಗಳು ಕೇಳಿಬರುತ್ತಿವೆ. ಯುವಕನೊಬ್ಬನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ ಲಕ್ಷ್ಮೀ ಅಗರ್ವಾಲ್ ಆ್ಯಸಿಡ್ ದಾಳಿಗೊಳಗಾಗಿದ್ದಳು. ಆನಂತರ ಆಕೆ ತನ್ನ ಹಾಗೆ ಆ್ಯಸಿಡ್ದಾಳಿಗೆ ಬಲಿಪಶುಗಳಾದ ಸ್ತ್ರೀಯರಿಗೆ ನೆರವಾಗಲು ಎನ್ಜಿಓ ಸಂಸ್ಥೆಯೊಂದನ್ನು ಆರಂಭಿಸಿದ್ದರು. ಪ್ರಬಲವಾದ ಸಾಮಾಜಿಕ ಸಂದೇಶವನ್ನು ಹೊಂದಿರುವ ಈ ಚಿತ್ರವು ಮುಂದಿನ ವರ್ಷದ ಫೆಬ್ರವರಿಯಲ್ಲಿ ಸೆಟ್ಟೇರಲಿದೆ. ಅಂದಹಾಗೆ ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಕೂಡಾ ಸಹನಿರ್ಮಾಪಕಿಯಾಗಲಿದ್ದಾರೆ.
ದೀಪಿಕಾ ಈಗಾಗಲೇ ತನ್ನದೇ ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸಿದ್ದು, ಸತ್ವಯುತವಾದ ಚಿತ್ರಗಳನ್ನು ನಿರ್ಮಿಸುವ ಹಂಬಲ ಹೊಂದಿದ್ದಾರೆ. ಈಗಾಗಲೇ ಬಾಲಿವುಡ್ನ ಇತರ ಜನಪ್ರಿಯ ನಟಿಯರಾದ ಅನುಷ್ಕಾ ಶರ್ಮಾ ಹಾಗೂ ಪ್ರಿಯಾಂಕಾ ಚೋಪ್ರಾ ಕೂಡಾ ನಿರ್ಮಾಪಕಿಯರಾಗಿ ಯಶಸ್ಸು ಕಂಡಿದ್ದಾರೆ. ಇದೀಗ ದೀಪಿಕಾ ಕೂಡಾ ಅವರ ಹಾದಿಯಲ್ಲಿ ನಡೆಯುತ್ತಿರುವ ಹಾಗೆ ಕಾಣಿಸುತ್ತಿದೆ.