ಅಜಿತ್ ಅಭಿಮಾನಿಗಳು ಬಿಜೆಪಿ ಬೆಂಬಲಿಸುತ್ತಾರೆಂದ ತಮಿಳುನಾಡು ಬಿಜೆಪಿ ನಾಯಕಿ
‘ತಲ’ ಖ್ಯಾತಿಯ ನಟ ಪ್ರತಿಕ್ರಿಯಿಸಿದ್ದು ಹೀಗೆ…
ಚೆನ್ನೈ, ಜ.22: ನಟ ಅಜಿತ್ ಅಭಿಮಾನಿಗಳು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ಬಿಜೆಪಿ ನಾಯಕಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟ ಅಜಿತ್ ತನಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನನಗೆ ಯಾವುದೇ ನೇರ ಅಥವಾ ಗೌಪ್ಯ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ ಎಂದು ಈ ಹಂತದಲ್ಲಿ ಹೇಳಬಯಸುತ್ತೇನೆ. ಸರತಿಯಲ್ಲಿ ನಿಂತು ಮತ ಚಲಾಯಿಸುವುದೇ ನಾನು ಹೊಂದಿರುವ ರಾಜಕೀಯ ಶಾಮೀಲಾತಿ. ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ ನೀಡಿ ಎಂದು ನಾನು ನನ್ನ ಅಭಿಮಾನಿಗಳಲ್ಲಿ ಯಾವತ್ತೂ ಹೇಳಿಲ್ಲ ಹಾಗೆ ಮಾಡುವುದೂ ಇಲ್ಲ. ಸರಿಯಾದ ಹಾದಿಯಲ್ಲಿ ಚಿತ್ರರಂಗ ಪ್ರವೇಶಿಸಿದ್ದೇನೆ. ನಾನು ರಾಜಕೀಯ ಮಾಡಲು ಯಾ ಇತರರೊಡನೆ ಸಂಘರ್ಷಕ್ಕಿಳಿಯಲು ಈ ಕ್ಷೇತ್ರಕ್ಕೆ ಬಂದಿಲ್ಲ'' ಎಂದು ನಟ ಹೇಳಿದ್ದಾರೆ.
ಅಜಿತ್ ಅವರ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿಯ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆಂದು ರವಿವಾರ ತಿರುಪುರ್ ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್ ಹೇಳಿರುವ ಹಿನ್ನೆಲೆಯಲ್ಲಿ ಅಜಿತ್ ಅವರ ಮೇಲಿನ ಹೇಳಿಕೆ ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಅಜಿತ್ ತಮ್ಮ ಅಭಿಮಾನಿಗಳ ಸಂಘವನ್ನು ವರ್ಷಗಳ ಹಿಂದೆಯೇ ವಿಸರ್ಜಿಸಿದ್ದಾಗಿ ಹೇಳಿದ್ದಾರೆ. ರಾಜಕೀಯ ಹೇಳಿಕೆಗಳನ್ನು ನೀಡದಂತೆ ತಮ್ಮ ಅಭಿಮಾನಿಗಳನ್ನು ಕೋರಿದ ಅಜಿತ್, ``ನಾನು ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ, ನನ್ನ ಅಭಿಮಾನಿಗಳೂ ಅಂತೆಯೇ ಮಾಡಬೇಕೆಂದು ಬಯಸುತ್ತೇನೆ'' ಎಂದಿದ್ದಾರೆ.