ನಟ ಕಲಾಭವನ್ ಮಣಿ ನಿಗೂಢ ಸಾವು ಪ್ರಕರಣ: ಇಂದಿನಿಂದ ಆರೋಪಿಗಳ ಸುಳ್ಳುಪತ್ತೆ ಪರೀಕ್ಷೆ
ಚಾಲಕುಡಿ (ಕೇರಳ), ಮಾ. 19: ಖ್ಯಾತ ಮಲಯಾಳಂ ನಟ ಕಲಾಭವನ್ ಮಣಿಯವರ ನಿಗೂಢ ಸಾವಿನ ತನಿಖೆಗೆ ಸಂಬಂಧಿಸಿ ಮಣಿಯವರ ಆಪ್ತ ಗೆಳೆಯರು ಹಾಗೂ ಸಹವರ್ತಿಗಳನ್ನು ಸಿಬಿಐ ಅಧಿಕಾರಿಗಳು ಇಂದು ಮತ್ತು ನಾಳೆ ಎರ್ನಾಕುಳಂನ ಸಿಬಿಐ ಕಚೇರಿಯಲ್ಲಿ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಣಿಯವರ ಮ್ಯಾನೇಜರ್ ಜೋಬಿ ಸೆಬಾಸ್ಟನ್, ಮಣಿಯವರ ಪತ್ನಿ ನಿಮ್ಮಿಯ ಸಂಬಂಧಿ ಎಂ.ಜಿ.ವಿಪಿನ್, ಗೆಳೆಯ ಸಿ.ಎ. ಅರುಣ್ ರನ್ನು ಇಂದು ಹಾಗೂ ಕೆ.ಸಿ.ಮುರುಗನ್, ಅನಿಲ್ಕುಮಾರ್ ಎಂಬವರನ್ನು ನಾಳೆ ವಿಚಾರಣೆ ನಡೆಸಲಾಗುವುದು. ಸಿನೆಮಾ ನಟರಾದ ಜಾಫರ್ ಇಡುಕ್ಕಿ, ಸಾಬುಮೋನ್ ಎಂಬವರನ್ನೂ ತನಿಖೆಗೊಳಪಡಿಸಲಾಗುವುದು.
2016 ಮಾರ್ಚ್ 6ರಂದು ಮಣಿ ಸಾವನ್ನಪ್ಪಿದ್ದರು. 2017ರಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು. ಮಣಿಯವರ ದೇಹದಲ್ಲಿ ಕೀಟನಾಶಕ ಪತ್ತೆಯಾದ ಬಗ್ಗೆ ಪೋಸ್ಟ್ ಮಾರ್ಟಂ ವರದಿಯಲ್ಲಿ ತಿಳಿಸಲಾಗಿತ್ತು. ಆದಾಗ್ಯೂ ವಿಷಾಂಶ ಮಣಿಯ ದೇಹ ಸೇರಿದ್ದಾದರೂ ಹೇಗೆ ಎಂಬುದು ಪತ್ತೆ ಹಚ್ಚುವುದು ಈಗ ಸಿಬಿಐ ಅಧಿಕಾರಿಗಳ ಮುಂದಿರುವ ದೊಡ್ಡ ಸವಾಲಾಗಿದೆ.