ಬೇಫಿಕ್ರೆ ಗೆ ಫೇವರಿಟ್ ಶಾರುಕ್ ಬದಲು ರಣವೀರ್ ಹೀರೊ ಆಗಿದ್ದು ಹೇಗೆ ?
ಆದಿತ್ಯ ಚೋಪ್ರಾ ಹೇಳಿದ ಸತ್ಯ
ತಮ್ಮ ಚಿತ್ರಗಳಿಗೆ ಯಾವತ್ತೂ ಶಾರುಕ್ ಖಾನ್ ಅವರನ್ನೇ ನಾಯಕ ನಟನನ್ನಾಗಿಸುತ್ತಿದ್ದ ಖ್ಯಾತ ನಿರ್ದೇಶಕ ಆದಿತ್ಯ ಚೋಪ್ರಾ ತಮ್ಮ ಲೇಟೆಸ್ಟ್ ಚಿತ್ರ ‘ಬೇಫಿಕ್ರೆ’ಗೆ ತಾವೇಕೆ ಶಾರುಕ್ ಖಾನ್ ಬದಲು ರಣವೀರ್ ಸಿಂಗ್ ಅವರಿಗೆ ಅವಕಾಶ ಕೊಟ್ಟಿದ್ದೇನೆಂಬುದಕ್ಕೆ ಕುತೂಹಲಕಾರಿ ವಿವರಣೆ ನೀಡಿದ್ದಾರೆ.
‘‘ಶಾರುಕ್ ಖಾನ್ ನನ್ನ ಪಾಲಿಗೆ ಒಂದು ಕೆಟ್ಟ ಅಭ್ಯಾಸ. ಅದನ್ನು ಬಿಟ್ಟು ಬಿಡಲು ಸಾಧ್ಯವಿಲ್ಲ’’ ಎಂದು ಹೇಳಿದ ಚೋಪ್ರಾ, ತಾವು ಶಾರುಕ್ ಅವರನ್ನು ಹೀರೋ ಮಾಡಿ ಚಿತ್ರ ನಿರ್ಮಿಸಿದಾಗೆಲ್ಲಾ ಶಾರುಕ್ ತಮ್ಮ ಕೆಲಸವನ್ನು ಸುಲಭವಾಗಿಸಿದ್ದಾರೆ ಎಂದಿದ್ದಾರೆ. ಇದರಿಂದಾಗಿ ಅವರನ್ನು
ಬಿಟ್ಟು ಬೇರೆಯವರನ್ನು ಹೀರೋ ಆಗಿಸಿ ಚಿತ್ರ ನಿರ್ಮಿಸುವ ಬಗ್ಗೆ ಯೋಚಿಸಲು ಸಾಧ್ಯವೇ ಇರುವುದಿಲ್ಲ, ಎಂದು ಅವರು ವಿವರಿಸುತ್ತಾರೆ.
‘‘‘ಬೇಫಿಕ್ರೆ’ ಚಿತ್ರವನ್ನು ಶಾರುಕ್ ಇಲ್ಲದೇ ನಿರ್ಮಿಸಲು ಯೋಚಿಸಿದಾಗ ನನಗೆ ನಿಜವಾಗಿಯೂ ಭಯವಾಗಿತ್ತು,’’ ಎಂದು ಹೇಳುವ ಚೋಪ್ರಾ ‘ಬೇಫಿಕ್ರೆ’ ಚಿತ್ರದಲ್ಲಿ ನನ್ನ ನಿಜ ಬಣ್ಣ ಎಲ್ಲಿ ಬಯಲಾಗುವುದೋ ಎಂಬ ಭಯವಿತ್ತು,’’ ಎಂದಿದ್ದಾರೆ.
‘‘‘ಬೇಫಿಕ್ರೆ’ ಚಿತ್ರದ ನಾಯಕ ಧರಂ ಪಾತ್ರಕ್ಕೆ ರಣವೀರ್ ಸೂಕ್ತ ವ್ಯಕ್ತಿಯೆಂದು ಕಥೆಯನ್ನು ತಿಳಿದಾಗಲೇ ತಾನು ನಿರ್ಧರಿಸಿದ್ದೆ’’ ಎಂದು ಅವರು ತಿಳಿಸುತ್ತಾರೆ. ‘‘ಆದುದರಿಂದ ಈ ಹೊಸ ಸಾಹಸಕ್ಕೆ ಹೊಸ ನಾಯಕನೊಂದಿಗೆ ನಾನು ಶಾರುಕ್ ಇಲ್ಲದೆ ಧುಮುಕಿದ್ದೇನೆ,’’ ಎಂದು ಚೋಪ್ರಾ ಹೇಳಿಕೊಂಡಿದ್ದಾರೆ.