ರಾಮ್ ಗೋಪಾಲ್ ವರ್ಮಾರ ಹೊಸ ಚಿತ್ರ , ಎಐಎಡಿಎಂಕೆ ಪಾಲಿನ ದುಃಸ್ವಪ್ನ !
ಸದ್ಯದಲ್ಲೇ ನಿಮ್ಮ ಪಕ್ಕದ ಚಿತ್ರಮಂದಿರಗಳಲ್ಲಿ ಶಶಿಕಲಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರನಿರ್ಮಾಪಕ ರಾಮ್ಗೋಪಾಲ್ ವರ್ಮಾ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪರಮಾಪ್ತೆ ಶಶಿಕಲಾ ಅವರ ಜೀವನ ಹಾಗೂ ಘಟನಾವಳಿಗಳ ಬಗ್ಗೆ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ವಿರೋಧಿಗಳನ್ನು ಕಾನೂನು ಸಮರದ ಮೂಲಕವೇ ಬಗ್ಗುಬಡಿಯುವ ಎಐಎಡಿಎಂಕೆ ಕಾರ್ಯವಿಧಾನದಿಂದಾಗಿ ವರ್ಮಾ ಅವರ ಹೊಸ ಸಾಹಸ ಕೋರ್ಟ್ ಮೆಟ್ಟಲೇರುವ ಸಾಧ್ಯತೆ ಅಧಿಕ.
ಆದರೆ ವರ್ಮಾ ಅವರ ನಿರೀಕ್ಷೆ ಸರಳ. ಅವರ ಚಿತ್ರದ ಕೇಂದ್ರ ಪಾತ್ರ ಶಶಿಕಲಾ; ಸಸಿಕಲಾ ಅಲ್ಲ. ಆದ್ದರಿಂದ ಇದು ಕಾಲ್ಪನಿಕ ಪಾತ್ರ ಎನ್ನುವುದು ಅವರ ಸಮರ್ಥನೆ.
ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಆಯ್ಕೆಯಾಗಿರುವುದನ್ನು ಎಐಎಡಿಎಂಕೆ ವಕ್ತಾರ ಗುರುವಾರ ಪ್ರಕಟಿಸಿದರೆ, ವರ್ಮಾ ಅದೇ ದಿನ ತಮ್ಮ ಚಿತ್ರದ ಶೀರ್ಷಿಕೆಯನ್ನು ನೊಂದಾಯಿಸಿದ್ದಾರೆ. ನಾನು ಜಯಲಲಿತಾ ಹಾಗೂ ಶಶಿಕಲಾ ಅವರ ಬಗ್ಗೆ ಅಪಾರ ಗೌರವ ಹೊಂದಿರುವ ಕಾರಣದಿಂದಲೇ ಈ ಚಿತ್ರ ನಿರ್ಮಿಸಲು ಮುಂದಾಗಿರುವುದಾಗಿ ವರ್ಮಾ ಟ್ವೀಟಿಸಿದ್ದಾರೆ.
ಮೊಟ್ಟಮೊದಲ ಬಾರಿಗೆ ಜಯಾ ಅವರನ್ನು ಶಶಿಕಲಾ ಭೇಟಿಯಾದಾಗಿನಿಂದ ಜಯಾ ಸಾವಿನವರೆಗಿನ ಘಟನಾವಳಿಗಳನ್ನು ಈ ಚಿತ್ರದಲ್ಲಿ ವಿವರಿಸುವುದಾಗಿ ವರ್ಮಾ ಹೇಳಿದ್ದಾರೆ. ಜಯಾ ಜತೆಗೆ ಶಶಿಕಲಾ ಅವರ ಜೀವನ ಚರಿತ್ರೆ ಇದು ಎಂದು ಹೇಳಿಕೊಂಡಿದ್ದಾರೆ.