'ಕಿರಿಕ್ ಪಾರ್ಟಿ' ಕರ್ಣ-ಆರ್ಯ ಒಂದಾಗ್ತಾರಾ? ಈ ಕುತೂಹಲಕ್ಕೆ ಚಿತ್ರದ ಭಾಗ-2ರಲ್ಲಿ ಉತ್ತರ
ಬಾಹುಬಲಿಯನ್ನು ಕಟಪ್ಪ ಯಾಕೆ ಕೊಂದ? ಎಂಬ ನಿಗೂಢತೆಯನ್ನು ಹುಟ್ಟುಹಾಕಿ ಮತ್ತೊಂದು ಸರಣಿಯ ಚಿತ್ರದತ್ತ ಜನರ ಚಿತ್ತವನ್ನು ಕೊಂಡೊಯ್ದವರು ರಾಜಮೌಳಿ. ಕನ್ನಡದಲ್ಲಿ 'ಕಿರಿಕ್ ಪಾರ್ಟಿ' ಅಂತದ್ದೇ ಒಂದು ಕೌತುಕವನ್ನು ಸಿನಿಮಾ ರಸಿಕರ ಪಾಲಿಗೆ ಕಾಡುವಂತೆ ಮಾಡಿದೆ.
ಸ್ಯಾಂಡಲ್ ವುಡ್ ನಲ್ಲಿ ಚರಿತ್ರೆ ಬರೆದಿರುವ 'ಕಿರಿಕ್ ಪಾರ್ಟಿ' ಸಿನಿಮಾದ ಕಥೆಯುದ್ದಕ್ಕೂ ಕರ್ಣ ಮತ್ತು ಆರ್ಯ ಜೊತೆ ಜೊತೆಯಾಗಿ ಸಾಗಿದರೂ ಸಂಸಾರದ ಬಂಡಿಯೇರುವ ಪರ್ವ ಎದುರಾಗಿರಲಿಲ್ಲ. ಅವರಿಬ್ಬರೂ ಒಂದಾಗುತ್ತಾರಾ ಎಂಬುದನ್ನೂ ಕಿರಿಕ್ ಕ್ಲೈಮ್ಯಾಕ್ಸ್ ತೋರಿಸಿಲ್ಲ. ಹಾಗಾಗಿ ಅದರ ಕ್ಲೈಮ್ಯಾಕ್ಸ್ ಬಗ್ಗೆ ಅಲ್ಪಸ್ವಲ್ಪ ಟೀಕೆ ವ್ಯಕ್ತವಾಗಿತ್ತು. ಆದರೆ ಆ ಅಸ್ಪಷ್ಟತೆ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ. ಈ ನಿಗೂಢತೆಯನ್ನು ಹುಟ್ಟುಹಾಕಿರುವ ರಿಷಬ್, ಆ ಪ್ರಶ್ನೆಗೆ 'ಕಿರಿಕ್ ಪಾರ್ಟಿ'ಯ ಮುಂದುವರಿದ ಭಾಗದಲ್ಲಿ ಗೊತ್ತುಪಡಿಸಲು ನಿರ್ಧರಿಸಿದ್ದಾರೆ. ಅರ್ಥಾತ್ 'ಕಿರಿಕ್ ಪಾರ್ಟಿ-2' ಚಿತ್ರ ಮಾಡುವ ಉದ್ದೇಶವನ್ನು ಅವರು ಆಗಲೇ ಹೊಂದಿದ್ದರು.
'ಕಿರಿಕ್ ಪಾರ್ಟಿ'ಯಲ್ಲಿ ಕರ್ಣ ಮತ್ತು ಆರ್ಯ ಪಾತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ತುಂಬಾ ಕ್ಯೂಟ್ ಜೋಡಿ ಎಂಬಂತೆ ನಿರ್ವಹಿಸಿದ್ದರು. ಇದೇ ಜೋಡಿ 'ಕಿರಿಕ್ ಪಾರ್ಟಿ-2'ರಲ್ಲೂ ಮೋಡಿ ಮಾಡುವ ಸಾಧ್ಯತೆ ಇದೆ.
ಕರ್ಣ-ಆರ್ಯ ಒಟ್ಟಾಗ್ತಾರಾ? ಎಂಬ ಹುಳ ಬಿಟ್ಟಿರುವ ರಕ್ಷಿತ್ ಟೀಮ್ ಈ ಬಗ್ಗೆ ಅನಂತರ ಗೊತ್ತಾಗಬಹುದು ಎಂದಿದ್ದಾರೆ. ಇಲ್ಲಿ 'ಅನಂತರ' ಎಂದರೆ ಯಾವಾಗ ಎಂಬುದು ಸ್ಪಷ್ಟವಿಲ್ಲ.
'ಕಿರಿಕ್ ಪಾರ್ಟಿ' ಎರಡನೇ ಭಾಗ ಬರಹುದು. ಅದು ಕಿರಿಕ್ ಪಾರ್ಟಿಯ ಮುಂದುವರಿದ ಭಾಗವೂ ಆಗಿರಬಹುದು ಅಥವಾ ಬೇರೆಯೇ ಕಾಲೇಜ್ ಕಥಾನಕವೂ ಆಗಿರಬಹುದು ಎಂದು ರಿಷಬ್ ಹೇಳುತ್ತಿದ್ದಾರೆ.
ಆದರೆ ಅವರ ಆಪ್ತರ ಪ್ರಕಾರ ಸದ್ಯವೇ 'ಕಿರಿಕ್ ಪಾರ್ಟಿ'ಯ ಮುಂದಿನ ಸರಣಿ ನಿರ್ಮಾಣವಾಗಲಿದೆಯಂತೆ. ಅದರಲ್ಲಿ ಕರ್ಣ-ಆರ್ಯ ಜೋಡಿ ಒಂದಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆಯಂತೆ.