ಮಣಿರತ್ನಂ ನಿರ್ದೇಶನದಲ್ಲಿ ಮತ್ತೆ ಒಂದಾಗಲಿರುವ “ದಳಪತಿ” ಜೋಡಿ?
ಮತ್ತೊಮ್ಮೆ ಮೋಡಿ ಮಾಡಲಿದೆ ಸೂಪರ್ ಸ್ಟಾರ್-ಮೆಗಾಸ್ಟಾರ್ ಕಾಂಬಿನೇಷನ್
ಚೆನ್ನೈ, ಮೇ 18: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮೆಗಾಸ್ಟಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ 1991ರಲ್ಲಿ ಬಿಡುಗಡೆಯಾದ “ದಳಪತಿ” ಚಿತ್ರ ಯಾರಿಗೆ ನೆನಪಿಲ್ಲ ಹೇಳಿ. ಚಿತ್ರರಂಗದ ಬಾಕ್ಸ್ ಆಫೀಸನ್ನೇ ಕೊಳ್ಳೆಹೊಡೆದ ಬ್ಲಾಕ್ ಬಸ್ಟರ್ ಚಿತ್ರವದು. ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದಿದ್ದ “ದಳಪತಿ” ಕಥೆ, ಚಿತ್ರಕಥೆಯಲ್ಲಿ ಅಂದಿನ ಕಾಲದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮೂಡಿಬಂದಿತ್ತು. ಇದೀಗ ಈ ಜೋಡಿ ಮತ್ತೊಮ್ಮೆ ಒಂದಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ರಜನಿ-ಮಮ್ಮುಟ್ಟಿ ಮುಖ್ಯಭೂಮಿಕೆಯಲ್ಲಿ ತೆರೆಗೆ ಬರಲಿರುವ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.
ಸೂಪರ್ ಹಿಟ್ “ದಳಪತಿ” ಚಿತ್ರದಲ್ಲಿ ಅರವಿಂದ್ ಸ್ವಾಮಿ, ಜೈಶಂಕರ್, ಅಮ್ರೀಶ್ ಪುರಿ, ಶ್ರೀವಿದ್ಯಾ, ಭಾನುಪ್ರಿಯಾ,ಶೋಭನಾ ಹಾಗೂ ಗೀತಾ ಸೇರಿದಂತೆ ದೊಡ್ಡ ತಾರಾಗಣವೇ ಇತ್ತು. ಮಮ್ಮುಟ್ಟಿ ಹಾಗೂ ರಜನಿಕಾಂತ್ ರ ವಿಭಿನ್ನ ಮ್ಯಾನರಿಸಂ ಚಿತ್ರಕ್ಕೆ ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು.
ಇದೀಗ 25 ವರ್ಷಗಳ ನಂತರ ಈ ಸ್ಟಾರ್ ಜೋಡಿ ಮತ್ತೊಮ್ಮೆ ಜೊತೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಮಣಿರತ್ನಂ ಈಗಾಗಲೇ ಸ್ಕ್ರಿಪ್ಟ್ ತಯಾರು ಮಾಡಿದ್ದು, ಈ ಪಾತ್ರಗಳಿಗೆ ರಜನಿ ಹಾಗೂ ಮಮ್ಮುಟ್ಟಿಯವರೇ ಸೂಕ್ತವಾಗಲಿದ್ದಾರೆ. ಇಬ್ಬರೂ ಸ್ಟಾರ್ ಗಳೊಂದಿಗೆ ಮಾತುಕತೆ ಮುಂದುವರಿದಿದೆ ಎನ್ನಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಸದ್ಯವೇ ಚಿತ್ರೀಕರಣ ಆರಂಭವಾಗಲಿದ್ದು, 2018ರ ವೇಳೆಗೆ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.