ದರ್ಶನ್ ಗಾಗಿ ಹೊಸ ಅವತಾರ: ಮೀಸೆ ಬೋಳಿಸಲು ಸಜ್ಜಾದ ಕ್ರೇಝಿಸ್ಟಾರ್
ಬೆಂಗಳೂರು, ಮೇ 23: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಗಿ ಕ್ರೇಝಿಸ್ಟಾರ್ ರವಿಚಂದ್ರನ್ ಇದುವರೆಗೂ ಮಾಡದ ಸಾಹಸವೊಂದಕ್ಕೆ ಮುಂದಾಗಿದ್ದಾರೆ. ಅದೇನೆಂದರೆ ದರ್ಶನ್ ಅಭಿನಯದ ಚಿತ್ರವೊಂದರ ನಟನೆಗಾಗಿ ರವಿಚಂದ್ರನ್ ಮೀಸೆ ಬೋಳಿಸಲಿದ್ದಾರೆ ಎನ್ನುವ ಸುದ್ದಿಯೊಂದು ಚಂದನವನದಲ್ಲಿ ಹರಿದಾಡುತ್ತಿದೆ.
ಮುನಿರತ್ನ ನಿರ್ಮಾಣದ ಭಾರೀ ಬಜೆಟ್ ನ 'ಕುರುಕ್ಷೇತ್ರ' ಚಿತ್ರ ಸೆಟ್ಟೇರುವ ಮುನ್ನವೇ ಭಾರೀ ಸುದ್ದಿಯಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಇದಾಗಲಿದ್ದು, ಪೌರಾಣಿಕ ಕಥೆಯ 'ಕುರುಕ್ಷೇತ್ರ'ದಲ್ಲಿ ದರ್ಶನ್ ಅವರು ದುರ್ಯೋಧನ ಪಾತ್ರ ಮಾಡಿದರೆ, ಕಿಚ್ಚ ಸುದೀಪ್ ಅವರು ಕರ್ಣನಾಗಿ ನಟಿಸಲಿದ್ದಾರಂತೆ. 'ಕುರುಕ್ಷೇತ್ರ' ಬಹುತಾರಾಗಣದ ಚಿತ್ರವಾಗಿದೆ. ಇದರಲ್ಲಿ ಶಿವರಾಜ್ ಕುಮಾರ್-ಧರ್ಮರಾಯನ ಪಾತ್ರ, ಉಪೇಂದ್ರ ಭೀಮನಾಗಿ, ಪುನೀತ್ ರಾಜ್ ಕುಮಾರ್ ಅರ್ಜುನನಾಗಿ ನಟಿಸಲಿದ್ದಾರೆ ಎನ್ನುವ ಮಾಹಿತಿಗಳಿವೆ.
ಇದೀಗ ಈ ಚಿತ್ರದಲ್ಲಿ ರವಿಚಂದ್ರನ್ ಅವರೂ ಅಭಿನಯಿಸುತ್ತಿದ್ದು, ಕ್ರೇಝಿಸ್ಟಾರ್ ರವಿಚಂದ್ರನ್ ಕೃಷ್ಣನಾಗಿ ಅಭಿನಯಿಸಲಿದ್ದಾರೆ. ಅಂದ ಹಾಗೆ ಕೃಷ್ಣನ ಪಾತ್ರಕ್ಕಾಗಿ ರವಿಚಂದ್ರನ್ ಮೀಸೆ ಬೋಳಿಸಬೇಕಿದೆ. ರವಿಚಂದ್ರನ್ ಅವರಿಗೆ ಮೀಸೆಯೇ ಆಕರ್ಷಣೆ. ಹೀಗಿರುವಾಗ ಕೃಷ್ಣನ ಪಾತ್ರಕ್ಕೆ ಅವರು ಒಪ್ಪುವರೇ ಎಂಬ ಅನುಮಾನ ಚಿತ್ರತಂಡಕ್ಕಿತ್ತು. ಆದರೆ ಇದಕ್ಕೆ ಕ್ರೇಜಿಸ್ಟಾರ್ ಸಿದ್ದರಾಗಿದ್ದಾರಂತೆ.