ಬಕಾಸುರನಾಗಿ ಬರುತ್ತಿದ್ದಾರೆ ಕ್ರೇಜಿಸ್ಟಾರ್!
ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅವರ 50ನೇ ಚಿತ್ರ 'ಕುರುಕ್ಷೇತ್ರ' ಸೆಟ್ಟೇರುವ ಮೊದಲೇ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ದರ್ಶನ್ , ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರವಿಚಂದ್ರನ್ ಸೇರಿದಂತೆ ಮಲ್ಟಿಸ್ಟಾರ್ ಸಿನಿಮಾ ಅದಾಗಿದ್ದು, 'ಕುರುಕ್ಷೇತ್ರ'ದಲ್ಲಿ ರವಿಚಂದ್ರನ್ ಪ್ರಮುಖ ಪಾತ್ರವನ್ನು ಮಾಡಲಿದ್ದಾರಂತೆ.
ಆ ಚಿತ್ರಕ್ಕೂ ಮುನ್ನ, ಇದೀಗ ರವಿಚಂದ್ರನ್ ಪಾಳಯದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ರವಿಚಂದ್ರನ್ 'ಬಕಾಸುರ' ಎಂಬ ಚಿತ್ರವೊಂದನ್ನು ಮಾಡುತ್ತಿದ್ದಾರೆ.
'ಅಂಜದ ಗಂಡು', 'ರಣಧೀರ' ಮೊದಲಾದ ಚಿತ್ರಗಳಂತೆಯೇ 'ಬಕಾಸುರ' ಕೂಡ ಒಂದು ವಿಭಿನ್ನ ಕಥಾಹಂದರವನ್ನು ಹೊಂದಿದೆಯಂತೆ.
'ಬಕಾಸುರ' ಎಂದು ಟೈಟಲ್ ಹೊಂದಿದ ಮಾತ್ರಕ್ಕೆ ಇದು ಮಹಾಭಾರತದ ಪಾತ್ರವಲ್ಲ. ರಾಕ್ಷಸನ ಹೆಸರಿದ್ದ ಮಾತ್ರಕ್ಕೆ ಪುರಾಣ ಪ್ರಸಂಗವೂ ಅಲ್ಲ. ಜನರಲ್ಲಿ ಕುತೂಹಲ ಉಂಟು ಮಾಡುವ ಉದ್ದೇಶದಿಂದ 'ಬಕಾಸುರ ಫಾರ್ ಮನಿ' ಎಂಬ ವಿಶೇಷ ಶೀರ್ಷಿಕೆ ಇಟ್ಟಿರುವುದಾಗಿ ಕ್ರೇಜಿಸ್ಟಾರ್ ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ರವಿಚಂದ್ರನ್ ಖ್ಯಾತ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಗೌಡ ಇದರಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದು, ಶಶಿಕುಮಾರ್ ಸೇರಿದಂತೆ ಹಲವರು ಇದ್ದಾರೆ.
ಅಂದಹಾಗೆ ಈಗಾಗಲೇ ಚಿತ್ರದ ಬಹುಭಾಗದ ಚಿತ್ರೀಕರಣ ಮುಗಿದಿದ್ದು, ಆಗಸ್ಟ್ ಅಂತ್ಯದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆಯಲ್ಲಿದ್ದಾರೆ ರವಿಚಂದ್ರನ್.