ದುಲ್ಕರ್ ಮತ್ತೆ ತಮಿಳಿಗೆ
2015ರಲ್ಲಿ ತೆರೆಕಂಡ ‘ಓಕೆ ಕಣ್ಮಣಿ’ ಚಿತ್ರದ ಮೂಲಕ ತಮಿಳು ಪ್ರೇಕ್ಷಕರ ಮನಗೆದ್ದ ದುಲ್ಕರ್ ಸಲ್ಮಾನ್, ಆನಂತರ ಮಲಯಾಳಂ ಚಿತ್ರರಂಗದಲ್ಲೇ ಬ್ಯುಸಿಯಾದರು. ಈ ಎರಡು ವರ್ಷಗಳಲ್ಲಿ ಅವರು ಚಾರ್ಲಿ, ಕಮ್ಮಾಡಿಪಡಂ, ಕಲಿ ಸೇರಿದಂತೆ ಸಾಲುಸಾಲಾಗಿ ಐದು ಸೂಪರ್ಹಿಟ್ ಚಿತ್ರಗಳನ್ನು ನೀಡಿದರು. ಈಗ ಅವರು ಮತ್ತೆ ತಮಿಳು ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ರಾ.ಕಾರ್ತಿಕ್ ಎಂಬ ಹೊಸ ನಿರ್ದೇಶಕ ಆ್ಯಕ್ಷನ್ಕಟ್ ಹೇಳಲಿರುವ ಈ ಚಿತ್ರ ರೋಮ್ಯಾಂಟಿಕ್ ಕಥಾವಸ್ತುವನ್ನು ಹೊಂದಿದೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ನಾಲ್ವರು ನಾಯಕಿಯರೂ ಇದ್ದಾರಂತೆ. ಆದಾಗ್ಯೂ ನಾಯಕಿಯರಾಗಿ ಅಭಿನಯಿಸಲಿರುವ ನಟಿಯರ್ಯಾರೆಂಬುದನ್ನು ಮಾತ್ರ ನಿರ್ದೇಶಕರು ಇನ್ನೂ ಸಸ್ಪೆನ್ಸ್ನಲ್ಲೇ ಇರಿಸಿದ್ದಾರೆ.
ಇದರ ಜೊತೆಗೆ ದುಲ್ಕರ್ ತೆಲುಗು, ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ಸಾವಿತ್ರಿ ಬಯೋಪಿಕ್ ಚಿತ್ರದಲ್ಲೂ ನಟಿಸಲಿದ್ದಾರಂತೆ. ತೆಲುಗುಚಿತ್ರರಂಗದ ದಂತಕತೆಯಾಗಿರುವ ನಟಿ ಸಾವಿತ್ರಿಯ ಬದುಕಿನ ಕಥೆಯನ್ನಾಧರಿಸಿದ ಈ ಚಿತ್ರದಲ್ಲಿ ದುಲ್ಕರ್, ಗತಕಾಲ ಪ್ರಸಿದ್ಧ ನಟ ಜೆಮಿನಿಗಣೇಶನ್ರ ಪಾತ್ರವನ್ನು ನಿರ್ವಹಿಸಲಿದ್ದಾರೆ.ಯುವ ಪ್ರತಿಭೆ ನಾಗ್ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಸಾವಿತ್ರಿಯಾಗಲಿದ್ದಾರೆ. ಖ್ಯಾತ ನಟಿ ಸಮಂತಾ ಕೂಡಾ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ.
ಒಟ್ಟಿನಲ್ಲಿ ದುಲ್ಕರ್ ಮಲಯಾಳಂ ಮಾತ್ರವಲ್ಲ ದಕ್ಷಿಣ ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ಎನಿಸಿಕೊಳ್ಳುವ ದಿನಗಳು ದೂರವಿಲ್ಲ ಎಂದು ಅಭಿಮಾನಿಗಳ ಅಂಬೋಣ.